ಹಾಸನ: ‘ಪಕ್ಷದ ಜತೆಗೆ ಸದೃಢ ದೇಶವನ್ನು ಕಟ್ಟುವ ಕನಸನ್ನು ಬಿಜೆಪಿ ಕಂಡಿದ್ದು, ಅದರ ಸಾಕಾರಕ್ಕೆ ಪ್ರತಿ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಸಲಹೆ ನೀಡಿದರು.
ನಗರದ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ನಡೆದ ಬಿಜೆಪಿ ನಗರ ಮಂಡಲ ಪ್ರಶಿಕ್ಷಣ ಹಾಗೂ ಹತ್ತು ಅಂಶಗಳ ವಿಷಯ ಚರ್ಚೆ ಸಭೆ ಉದ್ಘಾಟಿಸಿ ಮಾತನಾಡಿದರು.
‘ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಈ ತತ್ವ ನಿಷ್ಠೆಯೇದೇಶದಾದ್ಯಂತ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ. ಪ್ರತಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.
‘2014ರ ಲೋಕಸಭೆ ಚುನಾವಣೆಗೆ ಮೊದಲು ದೇಶದಲ್ಲಿ ಬಿಜೆಪಿ ಸ್ಥಿತಿ ಹೇಗಿತ್ತು ಹಾಗೂ ಈಗ ಯಾವ ಸ್ಥಾನದಲ್ಲಿದ್ದೇವೆ ಎಂಬುದರ ವಿಮರ್ಶೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವ ಗುರುವಾಗುವತ್ತ ದಾಪುಗಾಲಿಡುತ್ತಿದೆ’ ಎಂದು ಹೇಳಿದರು.
ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಮಾತನಾಡಿ, ‘ಪ್ರಶಿಕ್ಷಣ ವರ್ಗವು ಎಲ್ಲ ಕಾರ್ಯಕರ್ತರು ಒಂದೆಡೆ ಸೇರುವ ಸುಸಂದರ್ಭವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಿದ್ದು, ಯಾವುದೇ ಕ್ಷೇತ್ರದ ಚುನಾವಣೆ ನಡೆದರೂ ಹಾಸನದ ಕಾರ್ಯಕರ್ತರು ಅಲ್ಲಿರುತ್ತಾರೆ’ ಎಂದರು.
ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ಮೈಸೂರು ವಿಭಾಗ ಮುಖಂಡ ಕುಮಾರಸ್ವಾಮಿ, ಪದ್ಮನಾಭ ಹಾಗೂ ಇತರರು ಇದ್ದರು.