ಹಾಸನ: ಬಹಿರಂಗ ಪ್ರಚಾರಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ದೋಸ್ತಿ ಹಾಗೂ ಬಿಜೆಪಿ ಅಭ್ಯರ್ಥಿಗಳು ಬಿರುಸಿನ ಮತಬೇಟೆ ಮುಂದುವರಿಸಿದ್ದಾರೆ.
ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಅವರ ಸಹೋದರ ಡಾ.ಸೂರಜ್, ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿಗಳಲ್ಲಿ ರೋಡ್ ಶೋ ನಡೆಸಿದರು.
ಬಿಜೆಪಿ ಅಭ್ಯರ್ಥಿ ಎ.ಮಂಜು ಸಹ ಹೊಳೆನರಸೀಪುರ ತಾಲ್ಲೂಕಿನ ವಿವಿಧೆಡೆ ಮತಯಾಚನೆ ನಡೆಸಿದರು. ಹಾಗೆಯೇ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದರು.
ಅಣ್ಣ ಸೂರಜ್, ‘ನಮ್ಮ ತಂದೆ ಹಾಗೂ ತಾತ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ನೀಡಿ’ ಎಂದು ಮನವಿ ಮಾಡಿದರೇ, ಪ್ರಜ್ವಲ್ ರೇವಣ್ಣ, ‘ಬಿಜೆಪಿ ಅಭ್ಯರ್ಥಿ ಶಾಸಕರಾಗಿ, ಸಚಿವರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಅವರು ಸಿದ್ಧಾಂತ-ಬದ್ಧತೆ ಇಲ್ಲದ ರಾಜಕಾರಣಿ’ ಎಂದು ಜರಿದರು.
ಸಚಿವ ಎಚ್.ಡಿ.ರೇವಣ್ಣ ಹಾಸನ ನಗರ ಹಾಗೂ ತಾಲ್ಲೂಕಿನಲ್ಲಿ ಸಾರ್ವಜನಿಕ ಸಭೆ ನಡೆಸಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಲ್ಲಿ ಪ್ರಜ್ವಲ್ ಗೆ ಅತ್ಯಧಿಕ ಮತ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಿಜೆಪಿ ಅಭ್ಯರ್ಥಿ ನಾನು ರೌಡಿ ಎಂದು ಹೇಳಿಕೊಂಡಿದ್ದು, ಅವರನ್ನು ಮನೆಗೆ ಕಳಿಸಲು ಜನ ತೀರ್ಮಾನ ಮಾಡಿದ್ದಾರೆ. ‘ಲೋಕಸಭೆ ಚುನಾವಣೆ ನಂತರ ದೇವೇಗೌಡರ ಕುಟುಂಬ ನಾಟಕದ ಕಂಪನಿ ಬಂದ್ ಆಗಲಿದೆ’ ಎಂಬ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ರೇವಣ್ಣ, ‘ಬಂದ್ ಆಗುವುದು ಯಡಿಯೂರಪ್ಪ ಅಂಡ್ ಕಂಪನಿ’ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಬಾಯಿಗೆ ಬಂದ ಮಾತನಾಡುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೂ ಒಂದು ನಿಂಬೆಹಣ್ಣು ಕೊಡೋಣ ಎಂದು ನಗುತ್ತಲೇ ಟಾಂಗ್ ಕೊಟ್ಟ ರೇವಣ್ಣ, ‘ಮಂಡ್ಯ-ತುಮಕೂರಲ್ಲಿ ಗೆಲುವು ನಮ್ಮದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.