ಹಾಸನ: ‘ನಗರದ ಹೊರ ವಲಯದ ಹೇಮಗಂಗೋತ್ರಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಮುಂದಾಗಿರುವುದು 40 ಪರ್ಸೆಂಟ್ ಕಮಿಷನ್ ಉದ್ದೇಶವಾಗಿದೆ’ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ಶಿವಕುಮಾರ್ ಆರೋಪಿಸಿದರು.
‘ಶಿಕ್ಷಣ ಸಂಸ್ಥೆಯ ಸಮೀಪ ಟರ್ಮಿನಲ್ ನಿರ್ಮಿಸುತ್ತಿರುವುದು ಸರಿಯಲ್ಲ. ಸಾರ್ವಜನಿಕರ ವಿರೋಧದ ನಡುವೆ ಕಾಮಗಾರಿ ನಡೆಸುವುದು ಬೇಡ. ಕ್ಷೇತ್ರದ ಅಭಿವೃದ್ಧಿಗೆ ಯೋಚನೆ ಇಲ್ಲದ ಶಾಸಕರು ದೌರ್ಜನ್ಯ, ದಬ್ಬಾಳಿಕೆಯ ಆಡಳಿತ ನಡೆಸುತ್ತಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ನಗರದಲ್ಲಿ ಅನೇಕ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಅವುಗಳನ್ನು ಪೂರ್ಣಗೊಳಿಸುವ ಬಗ್ಗೆ ಯೋಚಿಸಬೇಕು. ಕಚೇರಿಗಳಲ್ಲಿಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಅಭಿವೃದ್ಧಿ ಬಗ್ಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.
‘ಶಾಸಕ ಎಚ್.ಡಿ.ರೇವಣ್ಣ ಅವರ ಶಿಕ್ಷಣ ಬಗ್ಗೆ ಮಾತನಾಡುವ ಪ್ರೀತಂ ಗೌಡ, ಡಬಲ್ ಡಿಗ್ರಿ ಪಡೆದು ಮಾಡಿರುವ ಅಭಿವೃದ್ಧಿ ಕೆಲಸವಾದರೂ ಏನು? ಅಗತ್ಯ ವಸ್ತುಗಳು,ರಸಗೊಬ್ಬರ ಏರಿಕೆ ಆಗಿದೆ. ಈ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರಿ ಶಾಲಾ, ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರವಿಕುಮಾರ್, ಶ್ರೀನಿವಾಸ್, ಪ್ರೇಮ್, ಬಾಬು ಇದ್ದರು.