ಆಲೂರು: ‘ ಎನ್ಡಿಎ 400 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿ ಸಂವಿಧಾನವನ್ನು ಬದಲಾಯಿಸುವ ಗುಪ್ತಗುರಿಯನ್ನು ಹೊಂದಿರುವುದರಿಂದ ಮತದಾರರು ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸಬೇಕು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಶ್ರೀಧರಕಲಿವೀರ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಮಾನತೆ, ಬಹುತ್ವ, ಒಕ್ಕೂಟ, ಸಂವಿಧಾನದ ಸಂಪೂರ್ಣ ಅಷ್ಠಾನಕ್ಕಾಗಿ ನಿರ್ಧರಿಸಿರುವ ಕಾಂಗ್ರೆಸ್–ಐ.ಎನ್.ಡಿ.ಐ.ಎ. ಗೆಲ್ಲಿಸಿ, ಸಂವಿಧಾನ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ–ಜನತಾದಳ– ಎನ್.ಡಿ.ಎ. ಸೋಲಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂವಿಧಾನವನ್ನು ಸಂರಕ್ಷಿಸಿ, ಜಾತಿ ಜನಗಣತಿ ಮತ್ತು ಸಾಮಾಜಿಕ, ಆರ್ಥಿಕ ಸಮೀಕ್ಷೆ, ಶೋಷಿತ ಬಹುಜನರಿಗೆ ಶೇ 50 ಮೀರಿ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ, ಪಂಚನ್ಯಾಯಗಳಾದ ಯುವ ನ್ಯಾಯ, ರೈತ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯ ಒಳಗೊಂಡ 'ನ್ಯಾಯಪತ್ರ' ಪ್ರಕಟಿಸಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಘೋಷಣೆ ಮಾಡಲಾಗಿದೆ ಎಂದರು. ಬಿಜೆಪಿ/ ಜೆಡಿಎಸ್/ ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಬೇಕೆಂದು ಮನವಿ ಮಾಡಿದರು.