ಚನ್ನರಾಯಪಟ್ಟಣ: ಪಟ್ಟಣದ ದೊಡ್ಡಮ್ಮ, ಚಿಕ್ಕಮ್ಮ, ಕರಿಮಾರಿಯಮ್ಮ, ಹಾಗೂ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು.
ರೇಣುಕಾನಗರದಲ್ಲಿ ತಳಿರು, ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಅಮಾನಿಕೆರೆ ಬಳಿ ಇರುವ ಅರಳಿಕಟ್ಟೆಯಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ದೇವರನ್ನು ಮಂಗಳವಾದ್ಯದೊಂದಿಗೆ ಅಡ್ಡೆ ಉತ್ಸವ ನೆರವೇರಿಸಲಾಯಿತು. ತಮಟೆಯ ನಾದಕ್ಕೆ ಯುವಕರು ಹೆಜ್ಜೆ ಹಾಕಿದರು. ಉತ್ಸವ ಅಗ್ರಹಾರ ಬೀದಿಯ ದೊಡ್ಡಮ್ಮ ದೇವಿ ದೇವಸ್ಥಾನಕ್ಕೆ ತೆರಳಿತು.
ದೇಗುಲದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಪೂಜೆ ನೆರವೇರಿಸಲಾಯಿತು. ಭಕ್ತರು ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಬಿ.ಎಂ. ರಸ್ತೆಯ ಮೂಲಕ ರೇಣುಕಾ ನಗರದ ದೇವಸ್ಥಾನದ ಬಳಿಗೆ ಆಗಮಿಸಿತು. ನಾಲ್ಕು ದೇವರ ಉಯ್ಯಾಲೋತ್ಸವ ಹಾಗೂ ಬೇವಿನ ಕೆಂಡೋತ್ಸವ ನಡೆಯಿತು.
ಮಂಗಳವಾರ ಬೆಳಿಗ್ಗೆ ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಲಾಯಿತು. ಬುಧವಾರ ನಾಲ್ಕು ದೇವರನ್ನು ಮೆರವಣಿಗೆ ನಡೆಸುವ ಸಂದರ್ಭ ಭಕ್ತರು ಪರಸ್ಪರ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಹೋಳಿ ಆಚರಿಸುವರು.