ಹಾಸನ: ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ ಮಂಗಳವಾರ ರಾತ್ರಿ ರೈಲಿಗೆ ಸಿಲುಕಿ ಒಂಟಿ ಸಲಗ ಮೃತಪಟ್ಟಿದೆ.
ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ರೈಲು ರಾತ್ರಿ 12ರ ಸುಮಾರಿಗೆ ಹಸಡೆ ಪಾಸ್ ಆಗುತ್ತದೆ. ಈ ಸಂದರ್ಭ ಅಡ್ಡ ಬಂದ ಆನೆಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ರೈಲು ಸ್ಥಳದಲ್ಲೇ ನಿಂತಿದ್ದು, ಆನೆ ಮೃತಪಟ್ಟಿದೆ.
ಗುಂಪಿನಿಂದ ಬೇರ್ಪಟಿದ್ದ ಒಂಟಿ ಸಲಗ ಕೆಲ ದಿನಗಳಿಂದ ರೈಲ್ವೆ ಹಳಿ ಮೇಲೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿತ್ತು. ದುರಾದೃಷ್ಟವಸಾತ್, ನಿನ್ನೆ ರಾತ್ರಿ ರೈಲಿಗೆ ಸಿಲುಕಿ ಸಾವನ್ನಪ್ಪಿದೆ.
ಕ್ರೇನ್ ಮೂಲಕ ಆನೆ ಮೃತದೇಹವನ್ನು ತೆರವುಗೊಳಿಸಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.