ಸಕಲೇಶಪುರ: ಕಾಡಾನೆಗಳು ದಾಳಿ ಮಾಡಿ ಮನೆ ಮುಂದಿನ ಗೇಟ್ ಮುರಿದು ತೆಂಗು, ಬಾಳೆ, ಅಡಿಕೆ ಹಾಗೂ ಇತರ ಬೆಳೆಗಳನ್ನು ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ಚಿಕ್ಕ ಸತ್ತಿಗಾಲ್ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಎಸ್.ಜೆ. ಅರುಂಧತಿ ಅವರ ಮನೆಯ ಅಂಗಳಕ್ಕೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುಮಾರು 20ಕ್ಕೂ ಹೆಚ್ಚು ಆನೆಗಳು ನುಗ್ಗಿವೆ. ಮರಿಗಳೊಂದಿಗೆ ದಾಂದಲೆ ನಡೆಸುತ್ತಿರುವುದನ್ನು ಕಂಡು ಮನೆಯೊಳಗಿದ್ದವರಿಗೆ ಜೀವ ಭಯ ಉಂಟಾಗಿತ್ತು.
‘ಮನೆಯ ಗೋಡೆ, ಕಿಟಕಿಗಳನ್ನು ಗುದ್ದಿ ಮನೆಯನ್ನೇ ಬೀಳಿಸುತ್ತವೆಯೋ ಎಂಬ ಆತಂಕದಲ್ಲಿ ಬೆಳಿಗ್ಗೆವರೆಗೂ ಎಲ್ಲಾ ದೇವರನ್ನೂ ನೆನಪಿಸಿಕೊಂಡೆ’ ಎಂದು ಅರುಂಧತಿ ಸುದ್ದಿಗಾರರಿಗೆ ಘಟನೆಯನ್ನು ಭಯದಿಂದಲೇ ಹೇಳಿಕೊಂಡರು.
ಇದೇ ಗ್ರಾಮದ ರೈತ ಫಾಲಾಕ್ಷ, ನೀಲಕಂಠ ಅವರ ಕಾಫಿ ತೋಟದಲ್ಲೂ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
ದೊಡ್ಡಸತ್ತಿಗಾಲ್ ಗ್ರಾಮದ ರೈತ ನಿರ್ವಾಣಿ, ಲಕ್ಷ್ಮಣ ಹಾಗೂ ಗ್ರಾಮದ ಬಹುತೇಕ ರೈತರ ಭತ್ತದ ಗದ್ದೆಗಳಿಗೆ ನುಗ್ಗಿ ಸಸಿ ಮಡಿ ಹಾಗೂ ನಾಟಿ ಮಾಡಿರುವ ಪೈರು ತಿಂದು ತುಳಿದು ಹಾಳು ಮಾಡಿವೆ.