ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಕೆಂಚಟ್ಟಹಳ್ಳಿ ಬಳಿ ಭಾನುವಾರ ಬೆಳಿಗ್ಗೆ ಟಾಟಾ ಸುಮೋಗೆ ಹಿಂಬದಿಯಿಂದ ಕ್ವಾಲಿಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಹದಿಮೂರು ಮಂದಿ ಗಾಯಗೊಂಡಿದ್ದಾರೆ.
ಕೆಜಿಎಫ್ನ ನವೀನ್ ಕುಮಾರ್, ಪ್ರದೀಪ್, ಸುನಿಲ್ ಕುಮಾರ್, ಪುನೀತ್ ಸ್ಥಳದಲ್ಲೇ ಮೃತಪಟ್ಟರೇ, ಅನಿಲ್ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಜಿಎಫ್ ಮೂಲದ ಎಂಟು ಮಂದಿ ಕ್ವಾಲಿಸ್ ವಾಹನದಲ್ಲಿ ಮದುವೆ ನಿಮಿತ್ತ ಉಡುಪಿಗೆ ತೆರಳುತ್ತಿದ್ದರು. ಕೋಲಾರ ಜಿಲ್ಲೆಯ ಮುಳಬಾಗಿಲಿನ ಒಂದೇ ಕುಟುಂಬದ ಹತ್ತು ಜನರು ಟಾಟಾ ಸುಮೋದಲ್ಲಿ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಶಾಂತಿಗ್ರಾಮದ ಬಳಿ ಇಳಿದು ಕಾಫಿ ಕುಡಿದು ಮತ್ತೆ ಪ್ರಯಾಣ ಆರಂಭಿಸಿದ್ದಾರೆ.
ಕೆಂಚಟ್ಟಹಳ್ಳಿ ಬಳಿ ರೋಡ್ ಹಂಪ್ಸ್ ಹಾಕಿದ್ದರಿಂದ ಟಾಟಾ ಸುಮೋ ಚಾಲಕ ವಾಹನವನ್ನು ನಿಧಾನ ಮಾಡಿದ್ದಾನೆ. ಹಿಂದೆ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೊಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸುಮೋ ಪಲ್ಟಿಯಾಗಿದೆ. ಕ್ವಾಲಿಸ್ ವಾಹನದಲ್ಲಿದ್ದ ಎಂಟು ಜನರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ವಾಹನಗಳಲ್ಲಿಸಿಲುಕಿಕೊಂಡಿದ್ದವರನ್ನು ಸ್ಥಳೀಯರು ರಕ್ಷಿಸಿ, ಜಿಲ್ಲಾಸ್ಪತ್ರೆಗೆ ಸಾಗಿಸಿದರು.