ಹಾಸನ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಬದಲಾದ ಸಮಾಜದ ರೀತಿಯಲ್ಲಿ ಅಂಗನವಾಡಿಗಳು ಮಕ್ಕಳನ್ನು ಆಕರ್ಷಿಸುವಕೇಂದ್ರಗಳಾಗಬೇಕು. ಆದ್ದರಿಂದ ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು.ಕೇಂದ್ರದ ವೇಳಾ ಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆನೀಡುವುದರ ಜತೆಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸು ಮಾಡಿರುವ ₹ 339 ಕೋಟಿಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಕೊರೊನಾ ವಾರಿಯರ್ ಆಗಿ ಕೆಲಸಮಾಡಿ ಕೋವಿಡ್ನಿಂದ ಮೃತಪಟ್ಟ ಅಂಗನವಾಡಿ ನೌಕರರಿಗೆ ಕೂಡಲೇ ₹ 30 ಲಕ್ಷಪರಿಹಾರ ಬಿಡುಗಡೆ ಮಾಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡುವಾಗ ಮಗಳು ಬದಲು ಸೊಸೆ ಎಂದು ಬದಲಿಸಬೇಕು ಎಂದರು.
ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 8 ವರ್ಷದ ವರ್ಗೀಕರಣವನ್ನು ಕೈ ಬಿಡಬೇಕು. ಕೋಳಿ ಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಐಎಲ್ಸಿ ಶಿಫಾರಸ್ಸಿನಂತೆ ನೌಕರರಿಗೆಕನಿಷ್ಟ ವೇತನ ಜಾರಿ ಮಾಡಬೇಕು ಮತ್ತು ಕಾಯಂ ಮಾಡಬೇಕು. ಅಲ್ಲಿಯವರೆಗೂಮಾಸಿಕ ₹26 ಸಾವಿರ ವೇತನ ಕೊಡಬೇಕು ಎಂದರು.
ಖಾಲಿಯಿರುವ ಸಹಾಯಕಿಯರು, ಕಾರ್ಯಕರ್ತೆಯರ ಹುದ್ದೆಗಳನ್ನು ಮತ್ತು ಇಲಾಖೆಸಿಬ್ಬಂದಿ ಹುದ್ದೆ ಭರ್ತಿ ಮಾಡಬೇಕು. ಬಜೆಟ್ನಲ್ಲಿ ಕಡಿತವಾಗಿರುವ ₹8,452.38 ಕೋಟಿ ಹಣ ವಾಪಸ್ ನೀಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಪುಷ್ಪ, ಜಿಲ್ಲಾ ಕಾರ್ಯದರ್ಶಿ ಅರವಿಂದ್, ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾಧ್ಯಕ್ಷೆ ಇಂದ್ರಮ್ಮ, ಪದಾಧಿಕಾರಿಗಳಾದ ಸೌಭಾಗ್ಯ, ಪದ್ಮ, ಸುಶೀಲಾ, ಮೀನಾಕ್ಷಿ, ಶಾಲಿನಿ, ಸಲ್ಮಾ ಬಾನು ಇದ್ದರು.