ಹಾಸನ: ‘ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಥ ಸಪ್ತಮಿ ಅಂಗವಾಗಿ ಪತಂಜಲಿ ಯೋಗ ಪರಿವಾರದಿಂದ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಏಳು ಲೋಕದ ಸಂಚಾರಕ್ಕಾಗಿ ಸೂರ್ಯ ಹೊರಟಿದ್ದ. ಪ್ರಥಮ ದಿನದ ಅಂಗವಾಗಿ ರಥ ಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ನಮಸ್ಕಾರ ಮತ್ತು ಸೂರ್ಯನ ಆರಾಧನೆ ಪ್ರಕೃತಿಯ ಮೂಲವಾಗಿದ್ದು, ಎಲ್ಲರಿಗೂ ಸೂರ್ಯ ಆದಿ ದೇವ. ಜಗತ್ತಿನ ಚೈತನ್ಯಕ್ಕೆ ಸೂರ್ಯನೇ ಕಾರಣ’ ಎಂದು ತಿಳಿಸಿದರು.
‘ಸೂರ್ಯನ ಬಿಸಿಲಿನ ಶಾಖಕ್ಕೆ ಮೈ ಒಡ್ಡಿಕೊಳ್ಳುವುದರಿಂದ ವಿಟಮಿನ್ ‘ಡಿ’ ಸಿಗುತ್ತದೆ. ಸೂರ್ಯನ ಆರಾಧನೆ ಪವಿತ್ರ ಕೆಲಸ’ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್ ಮಾತನಾಡಿ, ಯೋಗ ಸಾಧನೆಯಲ್ಲಿ ತೊಡಗಿದವರು ದ್ವೇಷ, ಅಸೂಯೆ, ಅಸಹನೆಯನ್ನು ಗೆಲ್ಲುತ್ತಾರೆ. ಉತ್ತಮ ಆರೋಗ್ಯಕ್ಕೆ ಸೂರ್ಯ ನಮಸ್ಕಾರ ಸಾಕಷ್ಟು ನೆರವಾಗುತ್ತದೆ ಎಂಬುದನ್ನು ಸಾಕಷ್ಟು ನಿದರ್ಶನಗಳು ಸಾಬೀತುಪಡಿಸಿವೆ’ ಎಂದು ತಿಳಿಸಿದರು.
ಬೆಳಿಗ್ಗೆ 6 ರಿಂದ 7ರವರೆಗೆ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು.
ಪತಂಜಲಿ ಯೋಗ ಸಮಿತಿ ಪರಿವಾರದ ಪ್ರಭಾರಿಗಳಾದ ಗಿರೀಶ್, ಶೇಷಪ್ಪ, ಸುರೇಶ್ ಪ್ರಜಾಪತಿ, ಮಹಿಳಾ ಪ್ರಭಾರಿ ಹೇಮಲತಾ, ಲೀಲಾ, ರಾಜೇಶ್, ರಂಗನಾಥ್, ನಂದಕುಮಾರ್, ದಯಾನಂದ್, ದೊರೆಸ್ವಾಮಿ, ಮಂಜುನಾಥ್, ನಾಗೇಶ್ ಹಾಗೂ ಇತರರಿದ್ದರು.
108 ಸೂರ್ಯ ನಮಸ್ಕಾರ
ಹೊಳೆನರಸೀಪುರ: ‘ಸೂರ್ಯನ ಶಾಖ ಚರ್ಮಕ್ಕೆ ತಗುಲಿದರೆ ಚರ್ಮರೋಗಗಳು ಸುಳಿಯುವುದಿಲ್ಲ. ಸೂರ್ಯೋದಯಕ್ಕೆ ಮುನ್ನ ಸೂರ್ಯ ನಮ್ಕಸಾರ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಪತಂಜಲಿ ಯೋಗ ಕೂಟದ ಗಣೇಶ್ ಪ್ರಸಾದ್ ಹೇಳಿದರು.
ರಥ ಸಪ್ತಮಿ ಅಂಗವಾಗಿ ಶುಕ್ರವಾರ ಯೋಗ ಭವನದಲ್ಲಿ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗಾಸನದಲ್ಲಿ ಸೂರ್ಯ ನಮಸ್ಕಾರಕ್ಕೆ ಮಹತ್ವದ ಸ್ಥಾನವಿದೆ. ನಿತ್ಯ ಅಭ್ಯಾಸ ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ಹೇಳಿದರು.
ಆರ್.ಎಸ್.ನಾರಾಯಣರಾವ್, ಸತ್ಯನಾರಾಯಣಶೆಟ್ಟಿ, ಕರುಣಾಕರ್, ಎಚ್.ಎಸ್.ಲೋಕೇಶ್, ಎಂ.ಪಿ.ದಿನೇಶ್, ಸೌಮ್ಯಾ, ಪ್ರಭಾ, ನರಸಿಂಹ, ವಸಂತ ಇತರರುಭಾಗವಹಿಸಿದ್ದರು.