ಬಾಣಾವರ: ಪಟ್ಟಣದ ಐತಿಹಾಸಿಕ, ಹೊಯ್ಸಳರ ಕಾಲದ ಬಾಣೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯ ಕ್ರಮ ಏ.29 ರಿಂದ ಆರಂಭವಾಗಲಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ.
ಪ್ರಾಚೀನ ದೇಗುಲದ ಸಂರಕ್ಷಣೆಗಾಗಿ ಸಾರ್ವಜನಿಕರು ಸಮಿತಿ ರಚಿಸಿ ಪುನರ್ ನಿರ್ಮಾಣ ಕಾರ್ಯವನ್ನು 2012 ರಿಂದ ಆರಂಭಿಸಿದ್ದರು. ಹೊಯ್ಸಳರ ಕಾಲದ ನಿ ಮೂಲ ವಿಗ್ರಹಗಳಾದ ಶಿವಲಿಂಗ, ನಂದಿಯನ್ನು ಪ್ರತಿಷ್ಠಾಪಿಸಲಾಗುವುದು. ಬೃಹತ್ ಶಾಸನ ಶಿಲೆಯನ್ನು ದೇವಾಲಯದ ಮುಂಭಾಗದಲ್ಲಿ ಇರಿಸಲಾಗುವುದು ಎಂದು ದೇವಾಲಯ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ಲೋಕಾರ್ಪಣೆ ಕಾರ್ಯಕ್ರಮ ಗಳು ಏ.29ರಂದು ಗಂಗಾ ಪೂಜೆಯೊಂದಿಗೆ ಆರಂಭ ವಾಗುವುವು.
ಸ್ವಸ್ತಿ ಪುಣ್ಯಾಹ ವಾಚನ, ರಕ್ಷಾ ಬಂಧನ, ಪಂಚ ಕಳಸ, ಆರಾಧನೆ, ವಾಸ್ತು ಮಂಡಲ ಸಹಿತ ರಾಕ್ಷೋಘ್ನ ವಾಸ್ತು ಹೋಮ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಮಹಾ ಮೃತ್ಯುಂಜಯ ಸಹಿತ ನವಾಕ್ಷರಿ ಹೋಮ, ಬಾಣೇಶ್ವರ ಹಾಗೂ ನಂದೀಶ್ವರ ಸ್ವಾಮಿಯವರಿಗೆ ಪ್ರಾಣ ಪ್ರತಿಷ್ಠಾಪನೆ, ಮಹಾರುದ್ರ ಹೋಮ, ದುರ್ಗಾ ಹೋಮ, ಮಹಾಪೂರ್ಣಾಹುತಿ ಪೂಜೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ದೇವಾಲಯ ಲೋಕಾ ರ್ಪಣೆಯ ನಂತರ ಧಾರ್ಮಿಕ ಭಾವೈಕ್ಯ ಸಮಾರಂಭ ಹಮ್ಮಿ ಕೊಳ್ಳಲಾಗಿದೆ.
ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದಿರೆ ದೊಡ್ಡಮಠದ ಪ್ರಭುಕುಮಾರ್ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಸಿಕೇಂದ್ರ ಸ್ವಾಮೀಜಿ, ಕೆ.ಆರ್.ನಗರ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗಡೆ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಶ್ರೀಕ್ಷೇತ್ರದ ಇತಿಹಾಸ
ರಾಮ– ಲಕ್ಷ್ಮಣರು ಸೀತಾಮಾತೆಯನ್ನು ಹುಡುಕಿಕೊಂಡು ಹೊರಟಾಗ ಮಾರ್ಗಮಧ್ಯೆ ಬಾಣಾವರಕ್ಕೆ ಭೇಟಿ ನೀಡುತ್ತಾರೆ. ಆಗ ಲಕ್ಷ್ಮಣನು ಬಾಣ, ಬತ್ತಳಿಕೆ, ಸಾಮಾನು ಸರಂಜಾಮುಗಳನ್ನು ಹೊರಲಾಗದೇ ಅವುಗಳನ್ನು ಕೆಳಗೆ ಇಟ್ಟ ಸ್ಥಳವೇ ಮುಂದೆ ಬಾಣಹೊರ ಆಯಿತಂತೆ. ಇಂದು ಆ ಹೆಸರು ಮಾರ್ಪಾಟಾಗಿ ಬಾಣಾವರ ಎಂದಾಗಿದೆ.
11ನೇ ಶತಮಾನದಲ್ಲಿ ಈ ಊರು ಆಸ್ತಿತ್ವದಲ್ಲಿ ಇರುವುದಕ್ಕೆ ಶಾಸನಗಳಲ್ಲಿ ಉಲ್ಲೇಖವಿದೆ. ಪುರಾತನವಾದ ಊರ ಮಧ್ಯದಲ್ಲಿ ಸ್ಥಾಪಿಸಿದ ಬಾಣೇಶ್ವರ ದೇವಾಲಯ ಜನರ ಭಕ್ತಿಯ ಪ್ರತೀಕವಾಗಿದೆ. ಬಾಣೇಶ್ವರ ದೇವಸ್ಥಾನದ ಇನ್ನೊಂದು ಐತಿಹಾಸಿಕ ಸಂಗತಿ ಎಂದರೆ, ಈ ಊರಿನ ಬಹುಪಾಲು ದೇವಾಸ್ಥಾನದ ಬಾಗಿಲುಗಳು ಬಾಣೇಶ್ವರ ದೇವಾಸ್ಥಾನದ ದಿಕ್ಕಿಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.