ಹೊಳೆನರಸೀಪುರ: ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಸೋಮವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಭಾವಚಿತ್ರವಿರುವ ಭಿತ್ತಿಪತ್ರಗಳನ್ನು ಸುಟ್ಟರು.
ಬಾಗೂರು ಮಂಜೇಗೌಡ ಮಾತನಾಡಿ, ‘ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಈ ವಿಡಿಯೊದಲ್ಲಿ ಇರುವ ಮಹಿಳೆಯರ ಮಾನ ಹರಾಜಾಗಿದೆ. ಕೂಡಲೇ ಅವರು ಪ್ರಪಂಚದಲ್ಲಿ ಎಲ್ಲೇ ಅಡಗಿದ್ದರೂ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ರಾಜ್ಯವೇ ತಲೆ ತಗ್ಗಿಸುವಂತಹ ಕೃತ್ಯ. ಕಠಿಣ ಶಿಕ್ಷೆ ಆಗಲೇಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರುತಿ ಗುಂಡೇಗೌಡ ಮಾತನಾಡಿ, ‘ತುಂಬಾ ಸಭ್ಯಸ್ಥರಂತೆ ನಡೆದುಕೊಳ್ಳುವ ಪ್ರಜ್ವಲ್ ರೇವಣ್ಣ, ಮಹಿಳೆಯರ ಮಾನವನ್ನು ಹರಾಜಿಗಿಟ್ಟಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿಯಿಂದ ಸಾವಿರಾರು ಮಹಿಳೆಯರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಈತ ನಡೆಸಿರುವ ದೌರ್ಜನ್ಯಕ್ಕೆ ಸರಿಯಾದ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.
ಶಾಸಕ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಭಾವಚಿತ್ರವಿದ್ದ ಭಿತ್ತಿಪತ್ರಗಳನ್ನು ಸುಡಲು ಮುಂದಾದಾಗ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ತಡೆಯಲು ಯತ್ನಿಸಿ ವಿಫಲರಾದರು.
ಪುರಸಭೆ ಮಾಜಿ ಸದಸ್ಯ ರಾಘವೇಂದ್ರ, ಕಮಲಮ್ಮ, ಸೀತಮ್ಮ, ರೇವಮ್ಮ, ವೆಂಕಟೇಶ್, ಕೆ.ಆರ್. ಸುದರ್ಶನ್ ಬಾಬು, ಪುರಸಭಾ ಸದಸ್ಯ ತರಕಾರಿ ಮಂಜು, ವೆಂಕಟೇಶ್, ಜಾರ್ಜ್ ವಸಂತ್ ಕುಮಾರ್ ಡೋನಾಲ್ಡ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.