ಬೇಲೂರು: ‘ಪಟ್ಟಣದಲ್ಲಿ ಬಹುತೇಕ ಕಟ್ಟಡಗಳು ಕಾನೂನುಬದ್ಧವಾಗಿ ನಿರ್ಮಾಣವಾಗುತ್ತಿಲ್ಲ. ಒಂದು ಅಂತಸ್ತಿಗೆ ಲೈಸನ್ಸ್ ಪಡೆದು ಬಹು ಅಂತಸ್ತುಗಳ ಕಟ್ಟಡ ನಿರ್ಮಿಸುತ್ತಿದ್ದಾರೆ. ಹಾಗಿದ್ದರೂ ಪುರಸಭೆಯಿಂದ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಶಾಸಕ ಕೆ.ಎಸ್.ಲಿಂಗೇಶ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ಪುರಸಭೆ ವ್ಯಾಪ್ತಿಯಲ್ಲಿ ಕೆಲವರು ಮನೆ ನಿರ್ಮಾಣ ಮಾಡುವಾಗ ಹಳೆಯ ಮನೆಗಳ ಗೋಡೆಗಳನ್ನು ಕೆಡವಿ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಪುರಸಭೆಗೆ ನಷ್ಟ ಉಂಟಾಗುತ್ತಿದೆ. ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒಂದು ಅಂತಸ್ತಿಗೆ ಲೈಸನ್ಸ್ ಪಡೆದು 3–4 ಅಂತಸ್ತು ಕಟ್ಟಿಸುತ್ತಿದ್ದಾರೆ’ ಎಂದರು.
‘ಚನ್ನಕೇಶವ ದೇವಸ್ಥಾನದ ರಸ್ತೆಯ ಸುತ್ತಲಿನ ಪ್ರದೇಶಗಳಲ್ಲಿ ಅಕ್ರಮ ವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಕಟ್ಟಡ ಗಳನ್ನು ನಿರ್ಮಿಸಲು ಅನುಮತಿ ಪಡೆದಿದ್ದಾರೆಯೇ. ಅಕ್ರಮವಾಗಿ ಮನೆ ನಿರ್ಮಿಸಿದವರ ವಿರುದ್ಧ ಹಾಗೂ ಅದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಅವರಿಗೆ ಸೂಚಿಸಿದರು.
ಸರ್ವೇಯರ್ಗಳು ತಮ್ಮ ಕಚೇರಿಗೆ ಬರುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಸರ್ವೇಯರ್ಗಳು ಕಚೇರಿಯಲ್ಲಿ ಹಾಜರಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ಮಂಜೇಶ್ವರಿ ಮಾತನಾಡಿ, ‘ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಊಟ ಮತ್ತು ಉಪಾಹಾರ ನೀಡುತ್ತಿಲ್ಲ. ಇಲಾಖೆಗೆ ಬರುವ ಅನುದಾನದ ಬಗ್ಗೆ ಜನಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೆಲ ವಿದ್ಯಾರ್ಥಿ ನಿಲಯ ಗಳಲ್ಲಿ ಅಡುಗೆಯವರೇ ವಾರ್ಡ್ನ್ ಗಳಾಗಿದ್ದಾರೆ’ ಎಂದು ದೂರಿದರು.
ತಾ.ಪಂ ಅಧ್ಯಕ್ಷ ಜಿ.ಬಿ.ರಂಗೇಗೌಡ, ಉಪಾಧ್ಯಕ್ಷೆ ಜಮುನಾ ಅಣ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಎಸ್.ರವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾ ದಿಲೀಪ್, ಸೈಯ್ಯದ್ ತೌಫಿಕ್, ತಹಶೀಲ್ದಾರ್ ಎನ್.ವಿ.ನಟೇಶ್, ತಾ.ಪಂ ಇಒ ರವಿಕುಮಾರ್ ಇದ್ದರು.