ಕುಶಾಲನಗರ: ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ವೃತ್ತಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಇಲ್ಲಿನ ಬೈಕ್ ಮೆಕ್ಯಾನಿಕ್ ಸಂಘದ ಸದಸ್ಯರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಬೈಕ್ ಮೆಕ್ಯಾನಿಕ್ ಸಂಘದ ಅಧ್ಯಕ್ಷ ಭರತ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ತಹಶೀಲ್ದಾರ್ ಕಚೇರಿ ಮುಂದೆ ಜಾಮಾಯಿಸಿ, ಮೆಕ್ಯಾನಿಕ್ ವೃತ್ತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರಿಯಾಲಿಟಿ ಶೋ ತೀರ್ಪುಗಾರರು ಹಾಗೂ ಸ್ಪರ್ಧಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
‘ಮೆಕ್ಯಾನಿಕ್ ವೃತ್ತಿ ನಿರ್ವಹಿಸುವ ಶ್ರಮಿಕ ವರ್ಗದ ಬಗ್ಗೆ ಕೀಳಾಗಿ ನಿಂದಿಸಿ ಅವಮಾನಿಸಲಾಗಿದ್ದು, ತೀರ್ಪುಗಾರರು ಕೂಡ ಆಕ್ಷೇಪ ವ್ಯಕ್ತಪಡಿಸದೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲ್ಲೂಕು ತಹಶೀಲ್ದಾರ್ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಚಂದ್ರ, ಖಜಾಂಚಿ ದರ್ಶನ್, ಕಾರ್ಯದರ್ಶಿ ವೆಂಕಟೇಶ್ ಭಾಗವಹಿಸಿದ್ದರು.