ಹಾಸನ: ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಸೋಲುತ್ತಾರೆ ಎಂಬ ಭಯದಿಂದ ಮುಖಂಡರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಯೋಗಾ ರಮೇಶ್ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿರುವ ಮಂಜು ಅವರನ್ನು ಸೋಲಿಸುವಂತೆ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಎ.ಮಂಜು ಅವರಿಗೆ ಎಷ್ಟು ಜನ ಗುರುಗಳಿದ್ದಾರೆ? ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸ್ವ ಹಿತಾಸಕ್ತಿಗೆ ರಾಜಕೀಯ ಮಾಡುತ್ತಿರುವ ಮಂಜು, ಕಾಂಗ್ರೆಸ್ ಪಕ್ಷ ತೊರೆದ ನಂತರವು ಸಿದ್ದರಾಮಯ್ಯ ಅವರೇ ನನ್ನ ಗುರುಗಳು ಎನ್ನುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಸಮಯ ಸಾಧಕರಂತೆ ಪಕ್ಷ ಬದಲಿಸುತ್ತಿದ್ದಾರೆ. ಆದರೆ, ಸಚಿವರಾಗಿದ್ದಾಗ ತಾವು ಕೈಗೊಂಡ ಅಭಿವೃದ್ಧಿಗಳನ್ನ ಹೇಳಿ ಮತ ಕೇಳದೆ ಮೋದಿ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದರೆ ಎಂದು ವ್ಯಂಗ್ಯವಾಡಿದರು.
ಇಷ್ಟು ವರ್ಷದ ಅವರ ರಾಜಕೀಯ ಜೀವನದಲ್ಲಿ ಎಚ್.ಎನ್ ನಂಜೇಗೌಡ, ಬಿ.ಬಿ.ಶಿವಪ್ಪ, ಎಸ್.ಎಂ ಕೃಷ್ಣ, ಶ್ರೀನಿವಾಸ್ ಪ್ರಸಾದ್, ಬಿ.ಎಸ್ ಯಡಿಯೂರಪ್ಪ ಇವರನ್ನೆಲ್ಲಾ ಸಂದರ್ಭಕ್ಕೆ ತಕ್ಕಂತೆ ಗುರುಗಳೆಂದು ತಮ್ಮ ರಾಜಕೀಯ ಚಾಳಿ ಮುಂದುವರೆಸಿದ್ದಾರೆ ಎಂದು ಟೀಕಿಸಿದರು.
2011ರಲ್ಲಿ ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮಂಜು, ಅಂದು ಯಡಿಯೂರಪ್ಪ ಅವರಿಂದ ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳಲಿ. ತಮ್ಮ ಮಗನನ್ನು ಪಕ್ಷಕ್ಕೆ ಕರೆತರದೆ, ಹಣ ಹಂಚಲು ಬಿಟ್ಟಿದ್ದಾರೆ. ಇಂತಹ ರಾಜಕಾರಣ ಇವರಿಗೆ ಬೇಕೆ’ ಎಂದರು.
ಮಂಜು ಗೊಂದಲ ಸೃಷ್ಟಿಸುತ್ತಾರೆ ಹೊರೆತು ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಅವರು ಪಕ್ಷ ಸೇರ್ಪಡೆ ವೇಳೆ ತಮ್ಮ ಸಂಗಡಿಗರನ್ನು ಏಕೆ ಬಿಜೆಪಿಗೆ ಕರೆದು ಕೊಂಡು ಹೋಗಲಿಲ್ಲ . ಅವರು ಅಧಿಕಾರ ಸಿಕ್ಕಗಾ ಉಂಡಮನೆಗೆ ಎರಡು ಬಗೆಯುವ ಬುದ್ದಿಹೊಂದಿದ್ದಾರೆ ಎಂದು ದೂರಿದರು.