ಬೆಂಗಳೂರು: ಚೊಚ್ಚಲ ಆವೃತ್ತಿಯ ಮಾನ್ಸೂನ್ ಸರ್ಫ್ ಚಾಲೆಂಜ್ ಟೂರ್ನಿ ಜೂನ್ 2ರಿಂದ 7ರವರೆಗೆ ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ನಡೆಯಲಿದೆ.
ಮಂತ್ರ ಸರ್ಫ್ ಕ್ಲಬ್ ಮತ್ತು ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಪ್ರೊಮೋಷನ್ ಕೌನ್ಸಿಲ್ ಸಹಯೋಗದಲ್ಲಿ ಟೂರ್ನಿ ಆಯೋಜನೆಯಾಗಿದೆ.
ಟೂರ್ನಿಯಲ್ಲಿ ಭಾರತದ ಪ್ರಮುಖ 30 ಮಂದಿ ಸರ್ಫರ್ಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ವಿಜೇತರಿಗೆ ₹75,000 ನಗದು ಬಹುಮಾನ ನೀಡಲಾಗುತ್ತದೆ. ರನ್ನರ್ಸ್ ಅಪ್ ಸ್ಥಾನ ಗಳಿಸಿದವರು ₹ 50,000 ನಗದು ಜೇಬಿಗಿಳಿಸಲಿದ್ದಾರೆ.
ಕೊವೆಲಾಂಗ್ ಪಾಯಿಂಟ್ ಸರ್ಫ್ ಸ್ಕೂಲ್, ಕೋವಲಮ್ ಸರ್ಫ್ ಕ್ಲಬ್, ಓಸೀಯನ್ ಡಿಲೈಟ್ ಸರ್ಫ್ ಸ್ಕೂಲ್, ಮುಮು ಸರ್ಫ್ ಕ್ಲಬ್ ಮತ್ತು ಮಂತ್ರ ಸರ್ಫ್ ಕ್ಲಬ್ಗಳಲ್ಲಿ ತರಬೇತಿ ಪಡೆಯುತ್ತಿರುವ ಸರ್ಫರ್ಗಳೂ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
‘ಮಂಗಳೂರಿನಲ್ಲಿ ಸಾಧ್ಯವಾದಷ್ಟು ಹೆಚ್ಚು ಸರ್ಫಿಂಗ್ ಸ್ಪರ್ಧೆಗಳನ್ನು ಆಯೋಜಿಸಬೇಕೆಂಬುದು ನಮ್ಮ ಉದ್ದೇಶ. ಈ ಕಾರಣದಿಂದಲೇ ಈ ಬಾರಿಯಿಂದ ಮಾನ್ಸೂನ್ ಸರ್ಫಿಂಗ್ ಚಾಲೆಂಜ್ ನಡೆಸಲು ತೀರ್ಮಾನಿಸಿದ್ದೇವೆ. ಈ ಟೂರ್ನಿ ಭಾರತದ ಸರ್ಫರ್ಗಳಿಗೆ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆಯಾಗಲಿದೆ’ ಎಂದು ಕೆನರಾ ಸರ್ಫಿಂಗ್ ಕ್ಲಬ್ನ ಕಾರ್ಯದರ್ಶಿ ಗೌರವ್ ಹೆಗ್ಡೆ ತಿಳಿಸಿದ್ದಾರೆ.