ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮಾಲೋಕ ಸೃಷ್ಟಿಸುತ್ತಿರುವ ಕಾಂಗ್ರೆಸ್ ನಾಯಕರು: ಬಿ.ಸಿ. ಪಾಟೀಲ

Last Updated 4 ಜುಲೈ 2022, 9:20 IST
ಅಕ್ಷರ ಗಾತ್ರ

ಹಾಸನ: ನಿಜವಾದ ಸಮೀಕ್ಷೆ ಮಾಡುವವರು ರಾಜ್ಯದ ಜನತೆ. ನಮ್ಮ ಸಮೀಕ್ಷೆ ಪ್ರಕಾರ ಬಿಜೆಪಿ ಪಕ್ಷ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಕಾಂಗ್ರೆಸ್ ಸಮೀಕ್ಷೆ ನಡೆಸಿದ್ದು 120ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತಾರೆ ಎಂಬ ವಿಚಾರವಾಗಿ ನಗರದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಸಮೀಕ್ಷೆ ಯಾರುಮಾಡಿಸಿದ್ದಾರೆ. ಅವರವರ ಸರ್ವೇ ಅವರು ಹೇಳಿಕೊಳ್ಳುತ್ತಾರೆ ಎಂದರು.

ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜನ ನೋಡುತ್ತಿದ್ದಾರೆ. ಒಂದು ಕಡೆ ಸಿದ್ದರಾಮೋತ್ಸವ ಅಂತ ಹೇಳುತ್ತಾರೆ. ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಸಾಮೂಹಿಕ ನಾಯಕತ್ವ ಎನ್ನುತ್ತಾರೆ. ಅವರಲ್ಲಿಯೇ ಹೊಂದಾಣಿಕೆಯ ಕೊರತೆ ಇದ್ದು, ಪಕ್ಷದಲ್ಲಿ ಕಚ್ಚಾಟ ನಡೆಯುತ್ತಿದೆ ಎಂದು ಟೀಕಿಸಿದರು.


ಅವರ ಕಚ್ಚಾಟ, ಅವರ ವೈಯಕ್ತಿಕ ವಿಚಾರ. ನಮಗೂ ಅದಕ್ಕೂ ಸಂಬಂಧವಿಲ್ಲ. ಆದರೆ ಇಂದು ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನಿರ್ನಾಮವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ಸಹ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ. ಪಂಜಾಬ್‌ನಲ್ಲಿಯೂ ಹೀನಾಯ ಸೋಲು ಕಂಡಿರುವುದು ಕಾಂಗ್ರೆಸ್‌ನ ವಾಸ್ತವ ಸ್ಥಿತಿಯನ್ನು ತೋರಿಸುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಭ್ರಮಾಲೋಕದಲ್ಲಿ ಇರುವಂತಹ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ಎಚ್. ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ಎಷ್ಟು ಸೀಟು ತೆಗೆದುಕೊಂಡು ಸಿಎಂ ಆಗುತ್ತಾರೆ ಎಂದು ಕುಮಾರಸ್ವಾಮಿ ಅವರನ್ನೇ ಕೇಳಿ. 122 ಅಥವಾ ಮ್ಯಾಜಿಕ್ ನಂಬರ್ 113 ಬರುತ್ತದೆಯೋ ಗೊತ್ತಿಲ್ಲ. ಆದರೆ 113 ಮ್ಯಾಜಿಕ್ ನಂಬರ್ ಬಂದರೆ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದರು.

ಸಮಯಕ್ಕೆ ಗೊಬ್ಬರ-ಬಿತ್ತನೆ ಬೀಜ ಪೂರೈಕೆ: ರಾಜ್ಯದಲ್ಲಿ ರೈತರಿಗೆ ಸರಿಯಾದ ಸಮಯದಲ್ಲಿ ಗೊಬ್ಬರ ಹಾಗೂ ಬಿತ್ತನೆ ಬಿಜೆಪಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಮುಗಿದಿರುವ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ಗೊಬ್ಬರ ಪೂರೈಕೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದರು.

ಪ್ರತ್ಯೇಕ ರಾಜ್ಯ: 'ಕಾಲಾಯ ತಸ್ಮೈ ನಮಃ'
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬ ವಿಚಾರದಲ್ಲಿ 'ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು. "ಕಾಲಾಯ ತಸ್ಮೈ ನಮಃ' ಎಂದು ಹೇಳುವ ಮೂಲಕ ಸಚಿವ ಬಿ.ಸಿ ಪಾಟೀಲ ಅವರು, ಸಚಿವ ಉಮೇಶ ಕತ್ತಿ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬುದು ಉಮೇಶ್ ಕತ್ತಿ ಅವರ ಅಭಿಪ್ರಾಯ ಆಗಿದೆ. ಅವರ ಅಭಿಪ್ರಾಯಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಎಂದೇನಿಲ್ಲ. ಆದರೆ ಸಮಯ, ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು' ಎಂದು ಹೇಳಿದ ಅವರು, 'ಆ ರೀತಿ ಆಗುವುದಿಲ್ಲ ಎಂದು ಪ್ರತಿಪಾದನೆ ಮಾಡುತ್ತಿಲ್ಲ. ಅದೇ ರೀತಿ ಯಾವುದೂ ಆಗಲ್ಲ ಎಂದು ಹೇಳಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.

ಈ ವಿಚಾರವಾಗಿ ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT