ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಗುರುವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ.
ಅಂಬಾರಿ ಆನೆ ಅರ್ಜುನನ ಸಾವಿನ ನೋವಿನೊಂದಿಗೆ ಸ್ಥಗಿತಗೊಂಡಿದ್ದ ಕಾಡಾನೆ ಕಾರ್ಯಚರಣೆ ಮತ್ತೆ ಪ್ರಾರಂಭವಾಗಲಿದ್ದು, ಬೇಲೂರು ತಾಲ್ಲೂಕಿನ ಬಿಕ್ಕೋಡು ಆನೆ ಶಿಬಿರಕ್ಕೆ ಸಾಕಾನೆಗಳು ಬಂದಿವೆ.
ಬುಧವಾರ ಸಾಕಾನೆಗಳಾದ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಶಿಬಿರಕ್ಕೆ ಬಂದಿದ್ದು, ಗುರುವಾರ ಕರ್ನಾಟಕ ಭೀಮ, ಮಹೇಂದ್ರ, ಅಭಿಮನ್ಯು ಸೇರಿ ಇನ್ನು ಕೆಲವು ಸಾಕಾನೆಗಳು ಬರುವ ನಿರೀಕ್ಷೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜುನನನ್ನು ಕೊಂದ ಕಾಡಾನೆಯನ್ನು ಹಿಡಿದೇ ತೀರುತ್ತೇವೆ ಎಂದು ಶಪಥ ಮಾಡಿದ್ದ ಮಾವುತರು ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದು, ಮಲೆನಾಡಿನಲ್ಲಿ ಹೆಚ್ಚಾಗಿರುವ ಕಾಡಾನೆ ಉಪಟಳದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮತ್ತೆ ಪ್ರಾರಂಭಿಸಲಾಗಿದೆ.
ಈ ಬಾರಿ 10 ಸಾಕಾನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಗುತ್ತಿದ್ದು, ಅಭಿಮನ್ಯು ನೇತೃತ್ವದಲ್ಲಿ ಬೇಲೂರು ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ.
ನವೆಂಬರ್ 23 ರಿಂದ ಕಾಡಾನೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 4ರಂದು ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದ್ದು, ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಸೌರಭ್ಕುಮಾರ್ ನೇತೃತ್ವ
ಜಿಲ್ಲೆಯ ನೂತನ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿ ಸೌರಭ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು ಅವರ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ. 2019ನೇ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ಸೌರಭ್ ಕುಮಾರ್ ಈ ಹಿಂದೆ ಮೈಸೂರು ಡಿಸಿಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಯಲ್ಲಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಡಿಸಿಎಫ್ ಮೋಹನ್ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು.