ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ ತಂಡ, ಚೇತನ್ ಹಾಗೂ ಲಿಖಿತ್ ಎಂಬುವವರನ್ನು ಭಾನುವಾರ ಬಂಧಿಸಿದೆ.
ನಗರದ ಎನ್.ಆರ್. ವೃತ್ತದಲ್ಲಿರುವ ಸೆನ್ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನೂ ವಿಚಾರಣೆ ಒಳಪಡಿಸಿದ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡರು. ಬಂಧಿತರು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ.
ಹಾಸನ ತಾಲ್ಲೂಕಿನ ಯಲಗುಂದ ಗ್ರಾಮದ ಚೇತನ್ ನಿವಾಸದಲ್ಲಿ ಒಂದೂವರೆ ಗಂಟೆ ಸ್ಥಳ ಮಹಜರು ನಡೆಸಿ, ಹೇಳಿಕೆ ಪಡೆಯಲಾಯಿತು. ಮತ್ತೊಬ್ಬ ಆರೋಪಿ ಲಿಖಿತ್ನನ್ನು ಶ್ರವಣಬೆಳಗೊಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.
ಏ.21 ರಂದು ಪೆನ್ಡ್ರೈವ್ ಹಂಚಿಕೆಯಾಗಿದ್ದು, ಆ ಕುರಿತು ಜೆಡಿಎಸ್ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿಯವರು, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟರಾಜು, ನವೀನ್ಗೌಡ, ಚೇತನ್ ಹಾಗೂ ಲಿಖಿತ್ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.
ಲೈಂಗಿಕ ದೌರ್ಜನ್ಯ, ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ವಕೀಲ ಜಿ.ದೇವರಾಜೇಗೌಡರನ್ನು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.