ಸಕಲೇಶಪುರ: ‘ಕಳೆದ 10 ವರ್ಷಗಳಿಂದ ಪುರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ಈ ಕಟ್ಟಡ ದುರಸ್ತಿಗೊಳಿಸಿ ಎಂದು ಹತ್ತಾರು ಬಾರಿ ಕೇಳಿಕೊಂಡರೂ ದುರಸ್ತಿ ಮಾಡಿಲ್ಲ. ಇದೀಗ ಸಂಪೂರ್ಣ ಸೋರಿಕೆ ಆಗುತ್ತಿದ್ದು, ಆರ್ಸಿಸಿ ಸಿಮೆಂಟ್ ಕಳಚಿ ಬೀಳುತ್ತಿದೆ. ಎಲ್ಲಿ ತಲೆ ಮೇಲೆ ಕಟ್ಟಡ ಬೀಳುತ್ತದೆಯೋ ಎಂಬ ಭಯದಲ್ಲಿಯೇ ವ್ಯವವಹಾರ ನಡೆಸುತ್ತಿದ್ದೇವೆ‘
ಪಟ್ಟಣದ ಹೃದಯ ಭಾಗದ ಹಳೆಯ ಬಸ್ ನಿಲ್ದಾಣ ಮುಂಭಾಗ ಸಂಪೂರ್ಣ ಶಿಥಿಲಗೊಂಡಿರುವ ಹೇಮಾವತಿ ಕಾಂಪ್ಲೆಕ್ಸ್ ಸ್ಥಿತಿಯ ಬಗ್ಗೆ ಅಲ್ಲಿಯ ಕೆಲ ಬಾಡಿಗೆದಾರರ ಆತಂಕ ಇದು.
‘ಬ್ಯಾಂಕ್ ಒಳಗೆ ಬರುವುದಕ್ಕೆ ಭಯವಾಗುತ್ತದೆ. ಮಳೆ ನೀರು ಸೋರುತ್ತಿದೆ. ಆರ್ಸಿಸಿ ಸಿಮೆಂಟ್ ಉದುರುತ್ತಿದ್ದು, ಕಬ್ಬಿಣ ತುಕ್ಕು ಹಿಡಿದಿರುವುದು ಕಾಣುತ್ತಿದೆ. ಮೂರು ವರ್ಷಗಳಿಂದ ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಕಟ್ಟಡದೊಳಗೆ ಜೀವ ಕೈಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ಗೆ ಬರುವ ಗ್ರಾಹಕರಂತೂ, ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ಬರುವಂತಾಗಿದೆ. ಒಳಗೆ ಬಂದು ಹೊರಗೆ ಹೋಗುತ್ತಿವೆಯೋ ಇಲ್ಲವೋ ಅನ್ನಿಸುವಷ್ಟು ಕಟ್ಟಡ ಶಿಥಿಲಾವಸ್ಥೆಯಲ್ಲಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬ್ಯಾಂಕ್ ಉದ್ಯೋಗಿ.
‘ಪುರಸಭೆಯಿಂದ 1980–81ರಲ್ಲಿ ನಿರ್ಮಾಣವಾದ ಹೇಮಾವತಿ ಕಾಂಪ್ಲೆಕ್ಸ್, 1984–85 ರಲ್ಲಿ ನಿರ್ಮಾಣ ಮಾಡಿದ ವಾಣಿಜ್ಯ ಭವನ, 1937–38ರಲ್ಲಿ ಅಸಿಸ್ಟೆಂಟ್ ಸರ್ಜನ್ ಕ್ವಾಟರ್ಸ್ ಕಟ್ಟಡಗಳು ಜನಸಂದಣಿ ಜಾಗಗಳಲ್ಲಿ ಇದ್ದು, ಶಿಥಿಲಾವಸ್ಥೆಯಲ್ಲಿ ಇರುವುದು ಕಂಡು ಬಂದಿದೆ’ ಎಂದು ಪುರಸಭೆ ಎಂಜಿನಿಯರ್ ಕೆ.ಆರ್. ಕವಿತಾ ತಿಳಿಸಿದ್ದಾರೆ.
‘ಈ ಕಟ್ಟಡಗಳ ಸ್ಥಿರತೆ ದೃಢೀಕರಣ (ಸ್ಟೆಬಿಲಿಟಿ ಸರ್ಟಿಫಿಕೇಟ್) ನೀಡಬೇಕು ಎಂದು 2022ರ ನವೆಂಬರ್ 17 ರಂದೇ ಇಲ್ಲಿಯ ಲೋಕೋಪಯೋಗಿ ಇಲಾಖೆಗೆ ಪುರಸಭೆಯಿಂದ ಪತ್ರ ಬರೆಯಲಾಗಿದೆ. 9 ತಿಂಗಳಿಂದ ಸ್ಥಿರತೆ ದೃಢೀಕರಣ ನೀಡಿಲ್ಲ’ ಎಂದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಹೇಮಾವತಿ ಕಾಂಪ್ಲೆಕ್ಸ್ ಶಿಥಿಲಗೊಂಡಿರುವ ಬಗ್ಗೆ ವಿಶೇಷ ವರದಿ ಪ್ರಕಟವಾದ ದಿನ ಆಗಸ್ಟ್ 1 ಉಪವಿಭಾಗಾಧಿಕಾರಿ ಅನಮೋಲ್ ಜೈನ್ ಅವರ ಆದೇಶದ ಮೇಲೆ, ಸ್ಥಿರತೆ ದೃಢೀಕರಣ ವರದಿ ಕೇಳಿ ಲೋಕೋಪಯೋಗಿ ಇಲಾಖೆಗೆ ಮತ್ತೊಂದು ಪತ್ರ ಕಳಿಸಲಾಗಿದೆ. ಹೇಮಾವತಿ ಕಾಂಪ್ಲೆಕ್ಸ್ ಮೇಲ್ನೋಟಕ್ಕೆ ಮಾತ್ರವಲ್ಲ, ಕಟ್ಟಡದ ಪಿಲ್ಲರ್ಗಳು, ಆರ್ಸಿಸಿ, ಗೋಡೆ ಶಿಥಿಲಾವಸ್ಥೆಯಲ್ಲಿ ಕಂಡು ಬಂದಿದೆ. ದುರಸ್ತಿ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿದೆ’ ಎಂದು ಹೇಳಿದರು.
ಕೂಡಲೇ ಈ ಕಟ್ಟಡ ಕೆಡವಿ ಹೊಸ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಬೇಕು. ಇಲ್ಲವಾದರೆ ಭಾರೀ ಅನಾಹುತ ಸಂಭವಿಸಿ ಜೀವ ಹಾನಿಗಳಾಗುವ ಸಾಧ್ಯತೆ ಇದೆ.ಮಹೇಶ್ ವ್ಯಾಪಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.