ಕೊಣನೂರು: ಬೆಲೆ ಕುಸಿತದಿಂದ ತಂಬಾಕು ಬೆಳೆಗಾರರಿಗೆ ಆಗುತ್ತಿರುವ ನಷ್ಟಕ್ಕೆ ಆಕ್ರೋಶ ವ್ತಕ್ತಪಡಿಸಿರುವ ಬೆಳೆಗಾರರು ಸೋಮವಾರದಿಂದ (ನ. 2ರಿಂದ) ಅಹೋರಾತ್ರಿ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದಾರೆ.
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿರುವ ರೈತಭವನದಲ್ಲಿ ಗುರುವಾರ ಸೇರಿದ್ದ ತಂಬಾಕು ಬೆಳೆಗಾರರ ಸಂಘದ ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣಮಾತನಾಡಿ, ‘ಬೆಳೆಗಾರರ ಸಂಘ, ಬೆಳೆಗಾರರು ಮತ್ತು ರೈತ ಸಂಘಟನೆಯ ಸಹಕಾರದೊಂದಿಗೆ ಧರಣಿ ಆರಂಭಿಸಲಾಗುವುದು’ ಎಂದು ಹೇಳಿದರು.
ಸೋಮವಾರ ಬೆಳಿಗ್ಗೆ ಬಸವೇಶ್ವರ ಸರ್ಕಲ್ನಿಂದ ಪ್ರತಿಭಟನೆ ಆರಂಭಿಸಿ ಹರಾಜು ಮಾರುಕಟ್ಟೆಯ ಆವರಣಕ್ಕೆ ತೆರಳಿ ಅಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಂಡು ಬೆಢಿಕೆ ಈಡೇರುವವರೆಗೂ ಧರಣಿ ನಡೆಸಲಾಗುವುದು ಎಂದು ಹೇಳಿದರು.
‘ಶಾಸಕರು ಆಸಕ್ತಿವಹಿಸಿ ರೈತ ನಿಯೋಗದೊಂದಿಗೆ ತೆರಳಿ ಸರ್ಕಾರದ ಗಮನಸೆಳೆಯಬೇಕು’ ಎಂದು ಕೋರಿದರು.
ಫ್ಲಾಟ್ ಫಾರಂ 7ರ ಬೆಳೆಗಾರರ ಸಂಘದ ಅಧ್ಯಕ್ಷ ನಿಲುವಾಗಿಲು ಈರಣ್ಣ ಮಾತನಾಡಿ, ‘ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಬೆಳೆಗಾರರ ಸಂಘವು ಅಹೋರಾತ್ರಿ ಧರಣಿಗೆ ಸಹಕಾರ ನೀಡಲಿದ್ದು, ರಾಮನಾಥಪುರವಷ್ಟೇ ಅಲ್ಲದೆ ಕಗ್ಗುಂಡಿ, ಕಂಪಲಾಪುರ, ಎಚ್.ಡಿ.ಕೋಟೆ ಮಾರುಕಟ್ಟೆ ವ್ಯಾಪ್ತಿಗೆ ಬರುವ ತಂಬಾಕು ಬೆಳೆಗಾರರು ಮತ್ತು ರೈತ ಮುಖಂಡರನ್ನು ಸಂಪರ್ಕಿಸಿ ಸರ್ಕಾರದ ಗಮನವನ್ನು ಸೆಳೆಯುವಂತೆ ಹೋರಾಟ ರೂಪಿಸಲಾಗುವುದು’ ಎಂದರು.
ಫ್ಲಾಟ್ ಫಾರಂ 63ರ ಬೆಳೆಗಾರರ ಸಂಘದ ಅಧ್ಯಕ್ಷ ಕಾಡನೂರು ಕುಮಾರ್ ಮಾತನಾಡಿ, ‘ಸಾವಿರಾರು ತಂಬಾಕು ಬೆಳೆಗಾರರಿಗೆ ವಿಧಿಸುತ್ತಿರುವ ಜಿಎಸ್ಟಿ ಮತ್ತು ದಂಡವನ್ನು ಹಿಂತೆಗೆದುಕೊಳ್ಳಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಬೆಳೆಗಾರರನ್ನು ಶೋಷಿಸುತ್ತಿರುವುದು ಖಂಡನೀಯ. ಅಹೋರಾತ್ರಿ ಧರಣಿಗೆ ಬೆಂಬಲಿಸುವುದಾಗಿ’ ತಿಳಿಸಿದರು.
ಸಭೆಯಲ್ಲಿ ರೈತ ಸಂಘದ ಹೊನಗಾನಹಳ್ಳಿ ಜಗದೀಶ್, ರೈತ ಮುಖಂಡ ನೇತ್ರಪಾಲ್, ಪಿರಿಯಾಪಟ್ಟಣ ಶ್ರೀನಿವಾಸ್, ಬೊಮ್ಮೇಗೌಡ, ಬಾಲಣ್ಣ, ಕಣಿಯಾರು ಮಹೇಶ್, ಕರ್ಕಿಕೊಪ್ಪಲು ಮಲ್ಲೇಶ್, ಕಾಡನೂರು ಚೇತನ್, ಶೇಷಪ್ಪ ಮಾತನಾಡಿದರು.
ಬೆಳೆಗಾರರ ಸಂಘದ ಕಾರ್ಯದರ್ಶಿ ಬಿಳಗುಲಿ ಪುಟ್ಟರಾಜು ಮತ್ತು 200ಕ್ಕೂ ಹೆಚ್ಚು ರೈತರಿದ್ದರು.