ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಉದ್ಯಮಿ ಸಚಿನ್ ನಾರಾಯಣ್ ಅವರ ಮನೆ ಮೇಲೂ ಸಿಬಿಐ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.
ನಗರದ ಬಿ.ಎಂ. ರಸ್ತೆಯ ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿಯಿರುವ ಮನೆ ಮೇಲೆ ಐವರು ಅಧಿಕಾರಿಗಳ ತಂಡ ದಾಳಿ ನಡೆಸಿ, ನಾಲ್ಕು ತಾಸು ವಿಚಾರಣೆ ನಡೆಸಿತು. ಸಚಿನ್ ಒಡೆತನದ ಸಂಸ್ಥೆಗಳ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿ, ಪರಿಶೀಲನೆ ಬಳಿಕ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಹೊರಟಿತು.
ಪ್ರತಿಷ್ಠಿತ ಉದ್ಯಮಿ ದಿ. ನಾರಾಯಣ್ ಅವರ ಕೊನೆಯ ಪುತ್ರ ಸಚಿನ್ ನಾರಾಯಣ್ ಅವರು ಶಿವಕುಮಾರ್ ಜತೆಗೆ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದಾರೆ. ಸಚಿನ್ ಗೈರು ಹಾಜರಿಯಲ್ಲಿ ಅವರ ಸಹೋದರ ಚೇತನ್ ನಾರಾಯಣ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಹಿಂದೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಆದಾಗಲೂ ಸಚಿನ್ ನಿವಾಸದ ಮೇಲೂ ದಾಳಿ ನಡೆದಿತ್ತು. ಪ್ರಕರಣದಲ್ಲಿ ಅವರು ಇನ್ನೂ ವಿಚಾರಣೆ ಎದುರಿಸುತ್ತಿದ್ದಾರೆ. ಸಚಿನ್ ಅವರು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಅಳಿಯ.