ಹಾಸನ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರುತ್ತಿದ್ದರೆ, ಇತ್ತ ನಗರದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿವಿಧ ಹೋಮ ಮತ್ತು ವಿಶೇಷ ಪೂಜಾ ಸಂಭ್ರಮ ನಡೆಯಿತು.
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಬೆಳಿಗ್ಗೆ 9ಕ್ಕೆ ರಾಮತಾರಕ ಹೋಮ, 10:30ಕ್ಕೆ ಪೂರ್ಣಾಹುತಿ ಕಾರ್ಯ ನೆರವೇರಿಸಲಾಯಿತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ನೆರೆದಿದ್ದ ಎಲ್ಲರಿಗೂ ಪ್ರಸಾದ ವಿತರಿಸಿದರು. ಎಲ್ಲರೂ ಮಾಸ್ಕ್ ಧರಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖಂಡ ನವೀಲೆ ಅಣ್ಣಪ್ಪ ಮಾತನಾಡಿ, ‘500 ವರ್ಷಗಳ ಹೋರಾಟದ ಫಲವಾಗಿ ಭಾರತೀಯರಿಗೆ ಸಿಕ್ಕಿರುವ ಜಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಹಸ್ತದಲ್ಲಿ ಭೂಮಿಪೂಜೆ ನೆರವೇರಿಸಿದ್ದಾರೆ. ಸಾರ್ವಜನಿಕರ ಭಾವನೆಗೆ ಸರಿಯಾದ ಸ್ಪಂದನೆ ಲಭಿಸಿರುವುದು ಹರ್ಷ ತಂದಿದೆ’ ಎಂದರು.
ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ನಗರ ಮಂಡಳ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಸುಶೀಲ ಅಣ್ಣಪ್ಪ, ಅರುಣ್ ಕುಮಾರ್ ಇದ್ದರು.
ಹಾಸನದ ಐನೆಟ್ ಗೆಳೆಯರ ಬಳಗದಿಂದ ಎಂ.ಜಿ. ರಸ್ತೆಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಯಿತು. ಜಿಲ್ಲಾ ಮಾಧ್ಯಮ ಪ್ರಮುಖ್ ವಿಜಯಕುಮಾರ್ ಶರ್ಮಾ ಮಾತನಾಡಿ, ‘ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ನೂರಾರು ವರ್ಷಗಳ ಕಾನೂನು ಹೋರಾಟದ ಫಲ ಹಾಗೂ ರಾಷ್ಟ್ರೀಯ ನಾಯಕರಾದ ದಿವಂಗತ ವಾಜಪೇಯಿ , ಹಿರಿಯರಾದ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಮೋದಿ ಅವರ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ವಿಷಯ’ಎಂದರು.