ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ: ಅನೈತಿಕ ಚಟುವಟಿಕೆ ತಾಣ ‘ಅರಸಿ ಉದ್ಯಾನ’

ನಿರ್ವಹಣೆಯ ಕೊರತೆ: ಮೂಲ ಸೌಕರ್ಯಗಳಿಲ್ಲದೇ ನಗರದ ನಾಗರಿಕರಿಗೆ ತೊಂದರೆ
ಪೂಜಾರು ರಮೇಶ್
Published 29 ಮೇ 2024, 5:31 IST
Last Updated 29 ಮೇ 2024, 5:31 IST
ಅಕ್ಷರ ಗಾತ್ರ

ಅರಸೀಕೆರೆ: ಸಾರ್ವಜನಿಕರ ಹಿತದೃಷ್ಟಿಯಿಂದ ನಗರಕ್ಕೆ ಹೊಂದಿಕೊಂಡಿರುವ ಕಂತೆನಹಳ್ಳಿ ಕೆರೆಯ ಸಮೀಪ ವಾಯು ವಿಹಾರ ಹಾಗೂ ಉತ್ತಮ ಪರಿಸರಕ್ಕಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಕೆರೆಯ ಅಂಗಳದಲ್ಲಿ ‘ಅರಸಿ ಉದ್ಯಾನ’ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಸುಮಾರು 2 ಕಿ.ಮೀ. ಉದ್ದನೆಯ ಪಾದಚಾರಿ ಮಾರ್ಗ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ, ಇದೀಗ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ನಗರಸಭೆಯ ನಿರ್ಲಕ್ಷ್ಯದಿಂದ ಅರಸಿ ಉದ್ಯಾನ ಮೂಲ ಸೌಕರ್ಯವಿಲ್ಲದೇ ಹಾಗೂ ಸಾರ್ವಜನಿಕರಿಗೆ ರಕ್ಷಣೆ ಇಲ್ಲದೇ ಸೊರಗಿದೆ. ಉತ್ತಮ ವಾತಾವರಣವಿದ್ದರೂ, ಸಾರ್ವಜನಿಕರಿಗೆ ಅನಾನೂಕೂಲಕರವಾಗಿದೆ ಎಂದು ಜನರು ದೂರುತ್ತಿದ್ದಾರೆ.

ಆರಂಭದ ದಿನಗಳಲ್ಲಿ ಅರಸಿ ಉದ್ಯಾನದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ ನಗರಸಭೆ, ಇತ್ತೀಚಿನ ದಿನಗಳಲ್ಲಿ ಇತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದಾಗಿ ಇಲ್ಲಿಗೆ ವಾಯುವಿಹಾರಕ್ಕೆ ಬರುವ ಕಂತೆನಹಳ್ಳಿ, ಮಾರುತಿ ನಗರ ಸೇರಿದಂತೆ ನಗರದ ನೂರಾರು ಜನರಿಗೆ ತೊಂದರೆ ಆಗುತ್ತಿದೆ.

ರಕ್ಷಣೆ ಇಲ್ಲದಂತಾಗಿದ್ದು, ಈ ಉದ್ಯಾನಕ್ಕೆ ಬರುವಾಗಲೇ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಬೀದಿ ನಾಯಿಗಳು ಸ್ವಾಗತ ಕೋರುತ್ತವೆ. ಪಾದಚಾರಿ ಮಾರ್ಗದ ಉದ್ದಕ್ಕೂ ಎರಡು ಬದಿ ಬೆಳೆದಿರುವ ಮರ ಗಿಡಗಳ ಕೊಂಬೆ ಹಾಗೂ ಬಳ್ಳಿಗಳು, ವಾಯುವಿಹಾರಿಗಳಿಗೆ ಅಡಿ ಅಡಿಗೂ ಅಡ್ಡಿಪಡಿಸುತ್ತಿವೆ. ವಾಯುವಿಹಾರಕ್ಕೆ ಬರುವವರು ತುಸು ಎಚ್ಚರ ತಪ್ಪಿದರೂ, ಮುಖ ಹಾಗೂ ತಲೆಗೆ ಗಾಯ ಮಾಡಿಕೊಳ್ಳುವುದು ನಿಶ್ಚಿತ ಎನ್ನುವಂತಾಗಿದೆ.

ಉದ್ಯಾನದಲ್ಲಿ ಬೀದಿ ನಾಯಿಗಳ ದರ್ಬಾರು, ಅಡೆತಡೆ ಇಲ್ಲದೇ ಬೆಳೆದಿರುವ ಮರಗಿಡಗಳು, ಸಮತಟ್ಟು ಕಳೆದುಕೊಂಡಿರುವ ಪಾದಚಾರಿ ಮಾರ್ಗ, ಕೆರೆಯ ಅಂಗಳದಲ್ಲೇ ಉದ್ಯಾನ ಇದ್ದರೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಸೇರಿದಂತೆ ಹಲವು ಸಮಸ್ಯೆಗಳು ಜೀವಂತವಾಗಿವೆ.

ಉದ್ಯಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಆಗಲಿ, ಉದ್ಯಾನ ಪಾಲಕರಾಗಲಿ ಅಥವಾ ಕಣ್ಗಾವಲು ಸಿಬ್ಬಂದಿಯಾಗಲಿ ಇಲ್ಲದೇ ಇರುವುದರಿಂದ ಉದ್ಯಾನದ ಮತ್ತೊಂದು ಬದಿ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ಇತ್ತೀಚೆಗೆ ವಾಯುವಿಹಾರಕ್ಕೆ ಬಂದ ಹಿರಿಯ ನಾಗರಿಕರೊಬ್ಬರನ್ನು ಕೊಲೆ ಮಾಡಿ, ಅವರ ಮೈ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿ ಆಗಿರುವ ಘಟನೆ ನಡೆದಿದೆ. ಇದರಿಂದಾಗಿ ಉದ್ಯಾನಕ್ಕೆ ಬರುವವರು ಭಯದಿಂದಲೇ ಹೆಜ್ಜೆ ಹಾಕುವಂತಾಗಿದೆ.

ಪರಿಸ್ಥಿತಿ ಹೇಗಿದ್ದರೂ ಉದ್ಯಾನದ ನಿರ್ವಹಣೆ ನಗರಸಭೆಗೆ ಸೇರಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ನಗರದ ವ್ಯಾಪ್ತಿಯಲ್ಲಿರುವ ಉದ್ಯಾನದತ್ತ ನಗರಸಭೆ ಆಡಳಿತದವರೂ ತಿರುಗಿ ನೋಡುತ್ತಿಲ್ಲ. ಇದು ಸಹಜವಾಗಿಯೇ ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಉದ್ಯಾನದಲ್ಲಿ ಬೀದಿ ನಾಯಿಗಳ ಹಿಂಡು
ಉದ್ಯಾನದಲ್ಲಿ ಬೀದಿ ನಾಯಿಗಳ ಹಿಂಡು
ವಾಯುವಿಹಾರಿಗಳ ಮುಖಕ್ಕೆ ರಾಚುತ್ತಿರುವ ಗಿಡ–ಮರಗಳು
ವಾಯುವಿಹಾರಿಗಳ ಮುಖಕ್ಕೆ ರಾಚುತ್ತಿರುವ ಗಿಡ–ಮರಗಳು

ಅರಸಿ ಉದ್ಯಾನದ ನಿರ್ವಹಣೆ ಮೂಲ ಸೌಕರ್ಯಗಳ ಕುರಿತು ನಗರಸಭೆ ಮುಖ್ಯಾಧಿಕಾರಿ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು.

–ಶಾಸಕ ಕೆ.ಎಂ.ಶಿವಲಿಂಗೇಗೌಡ

ಉದ್ಯಾನ ನಿರ್ಮಿಸದ ನಗರಸಭೆ

‘ಪುರಸಭೆಯಾಗಿದ್ದ ಅರಸೀಕೆರೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿ ಒಂದು ದಶಕವೇ ಕಳೆದಿದೆ. ನಗರದ ಜನಸಂಖ್ಯೆ 60 ಸಾವಿರ ಗಡಿ ದಾಟಿದೆ. ಜನಸಂಖ್ಯೆಗೆ ಅನುಗುಣವಾಗಿ ನಗರ ವ್ಯಾಪ್ತಿಯಲ್ಲಿ ಉದ್ಯಾನ ನಿರ್ಮಿಸುವಲ್ಲಿ ನಗರಸಭೆ ವಿಫಲವಾಗಿದೆ’ ಎಂದು ನಾಗರಿಕ ರಂಗಪ್ಪ ಹೇಳುತ್ತಾರೆ. ‘ನಗರಸಭೆ ಆಡಳಿತದ ಈ ನಿರ್ಲಕ್ಷ ಮನೋಭಾವದಿಂದಾಗಿ ಹೇಳಿಕೊಳ್ಳಲು ದೊಡ್ಡ ನಗರವಾಗಿದ್ದರೂ ಉದ್ಯಾನಗಳಿಲ್ಲ. ಇರುವ ಅರಸಿ ಉದ್ಯಾನ ಕೂಡ ಸಮರ್ಪಕ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT