ಹಾಸನ: ಬದುಕಿನಲ್ಲಿ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಪುರುಷ ಮತ್ತು ಮಹಿಳೆಗೆ ಆತ್ಮವಿಶ್ವಾಸ ಮುಖ್ಯ ಎಂದು ಮನೋರೋಗ ತಜ್ಞೆ ಡಾ.ನಿರುಪಮಾ ಹೇಳಿದರು.
ನಗರದ ಕುವೆಂಪು ಮಹಿಳಾ ಸಂಘದ ವತಿಯಿಂದ ನಡೆದ ಮಾಸಿಕ ಸಭೆ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಆಧುನಿಕ ಸಮಾಜದಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಸಹ ಖಿನ್ನತೆಯಿಂದ ಬಳಲುತ್ತಿದ್ದಾರೆ. ಯಾವುದಕ್ಕೆ ಬೆಲೆ ಕೊಡಬೇಕು ಮತ್ತು ಕೊಡಬಾರದು ಎಂಬುದನ್ನು ಅರ್ಥ ಮಾಡಿಕೊಂಡು ಬೇಡವಾದದ್ದನ್ನು ತಿರಸ್ಕರಿಸಬೇಕು. ಮನಸ್ಸಿನ ಕಾಯಿಲೆಗೆ ಚಿಕಿತ್ಸೆ ನೀಡುವುದು ಕಷ್ಟ. ಮತ್ತೊಬ್ಬರು ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚುಗೆಯ ಮಾತುಗಳನ್ನಾಡಬೇಕು ಎಂದು ನುಡಿದರು.
ಮಹಿಳೆಯರಿಗೆ ಅಹಂ ಇರಬಾರದು. ನಕಾರಾತ್ಮಕ ಚಿಂತನೆಗಳು ಜೀವನದ ನೆಮ್ಮದಿ ಹಾಳು ಮಾಡುವುದರ ಜತೆಗೆ ಮಾನಸಿಕ ಸಮಸ್ಯೆ ಉಂಟು ಮಾಡುತ್ತವೆ. ಅತಿಯಾದ ಆತ್ಮವಿಶ್ವಾಸ ಸಹ ಒಳ್ಳೆಯದಲ್ಲ. ಮೊದಲು ಮನಸ್ಸು ಗಟ್ಟಿ ಮಾಡಿಕೊಂಡು ಸಮಸ್ಯೆ ಎದುರಿಸಬೇಕು ಎಂದು ಸಲಹೆ ನೀಡಿದರು.
ಮನಸ್ಸು ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು. ಹೆಂಗಸರು ತಮ್ಮ ಮಾತಿನ ಮೂಲಕ ಭಾವನೆ ಹೊರ ಹಾಕುತ್ತಾರೆ. ಎಲ್ಲದಕ್ಕೂ ಸಮಾಧಾನ, ತಾಳ್ಮೆ ಬೇಕು. ಮನಸ್ಸಿನ ಕಾಯಿಲೆಗೆ ಕಾರಣ ತಿಳಿದಿಲ್ಲ. ಈ ಕುರಿತು ಶತಮಾನಗಳಿಂದಲೂ ಸಂಶೋಧನೆ ನಡೆಯುತ್ತಿದ್ದರೂ ಪರಿಹಾರ ದೊರಕಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಘದ ಆಧ್ಯಕ್ಷೆ ಸೌಭಾಗ್ಯಾ ತಾರಾನಾಥ್ ಆಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯೆ, ಪತ್ರಕರ್ತೆ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಸ್ಮಿತಾ ಪೂರ್ಣಿಮಾ ಪ್ರಾರ್ಥನಾಗೀತೆ ಹಾಡಿದರು. ಲತಾ ಸ್ವಾಗತಿಸಿದರು. ಜಯಾ ರಮೇಶ್ ಪರಿಚಯಿಸಿದರು. ಸುಜಾತಾ ವಂದಿಸಿದರು.