ಸಕಲೇಶಪುರ: ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರ ನಡೆದ ಮೊದಲ ವಾರದ ಸಂತೆಯಲ್ಲಿ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಎಪಿಎಂಸಿ ಆಡಳಿತಕ್ಕೆ ಸಂಬಂಧವೇ ಇಲ್ಲದ ಪುರಸಭೆಯ ಮಾಜಿ ನಾಮ ನಿರ್ದೇಶನ ಸದಸ್ಯ ನಂದೀಶ, ರುದ್ರಕುಮಾರ್, ರಾಘವೇಂದ್ರ, ಉಮೇಶ್ ಇವರ ವಿರುದ್ಧ ದೂರು ದಾಖಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ಯಾವುದೇ ಮಾರಾಟ ಸುಂಕ ವಿಧಿಸಿಲ್ಲದಿದ್ದರೂ, ವ್ಯಾಪಾರ ಸ್ಥಳಕ್ಕೆ ಆಗಮಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಎಪಿಎಂಸಿ ಅಧ್ಯಕ್ಷ ಎಚ್.ಎಚ್.ಉದಯ್ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಣ ವಸೂಲಿ ಮಾಡುತ್ತಿರುವ ವಿಷಯ ತಿಳಿದು ಸಮಿತಿ ಸದಸ್ಯರು ಹಾಗೂ ಕೆಲ ರೈತರು ಸಂತೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ವಸೂಲಿ ಮಾಡುತ್ತಿದ್ದವರು ತಮ್ಮ ಕಾರನ್ನೂ ಅಲ್ಲಿಯೇ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ. ಉಪ ವಿಭಾಗಾಧಿಕಾರಿ ಪಲ್ಲವಿ ಆಕುರಾತಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಹಣ ವಸೂಲಿ ಮಾಡಲು ಬಂದಿದ್ದವರ ಕಾರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.