ಹಾವೇರಿ: ‘ಪಕ್ಷದಿಂದ ಮೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಈಗಾಗಲೇ (ಹಾವೇರಿ– ಸಂಜಯ ಡಾಂಗೆ, ಶಿಗ್ಗಾವಿ– ಅಶೋಕ ಬೇವಿನಮರದ, ರಾಣೆಬೆನ್ನೂರು –ಶ್ರೀಪಾದ ಸಾವುಕಾರ) ಘೋಷಣೆ ಮಾಡಿದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ 23 ಆಕಾಂಕ್ಷಿಗಳು ಇದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರದ ಹೇಳಿದರು. ನಗರದಲ್ಲಿ ಗುರುವಾರ ನಡೆದ ಜೆಡಿಎಸ್ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಎಲ್ಲ ಏಳು ತಾಲ್ಲೂಕು ಸಮಿತಿ ಸದಸ್ಯರು ಬೂತ್ ಸಮಿತಿ ರಚನೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು’ ಎಂದರು.
‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಲ್ಪಸಂಖ್ಯಾತರ ಓಲೈಕೆಯು ಅತಿಯಾಗಿದೆ. ಆದರೆ, ಜೆಡಿಎಸ್ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಪಣ ತೊಟ್ಟಿದೆ’ ಎಂದರು. ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಉಮೇಶ ತಳವಾರ ಮಾತನಾಡಿದರು.
ಪಕ್ಷದ ಮುಖಂಡರಾದ ಡಾ. ಸಂಜಯ ಡಾಂಗೆ, ರಾಮಸಿಂಗ್ ರಜಪೂತ, ಮೋಹನ ಬಿನ್ನಾಳ, ಶ್ರೀಪಾದ ಸಾವುಕಾರ, ಸಿದ್ದನಗೌಡ ಪಾಟೀಲ, ಮಾಲತೇಶ ಶಿಡಗನಾಳ, ಎಂ.ಎಚ್.ಎರೇಮನಿ, ನಾಗೇಶ ಪಡೆಪ್ಪನವರ- ಹಾನಗಲ್, ಮಂಜುನಾಥ ಹೊನ್ನಾಳ, ಸತೀಶ ಮಾದಕರ ಇದ್ದರು.