ಹಾವೇರಿ:ದೇವಗಿರಿ ಗ್ರಾಮದ ಸುತ್ತಮುತ್ತಲಿನ ಹೊಲಗಳಿಗೆ ಹೋಗುವ ದಾರಿಗಳನ್ನು ವೀಕ್ಷಿಸಿದ್ದು, ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಡಿ ಹೊಲಕ್ಕೆ ಹೋಗುವ ಎಲ್ಲ ದಾರಿಗಳ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ತಹಶೀಲ್ದಾರ್ ಶಂಕರ್ ಜಿ.ಎಸ್. ಭರವಸೆ ನೀಡಿದರು.
ತಾಲ್ಲೂಕಿನ ದೇವಗಿರಿ ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ರೈತ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ನರೇಗಾ ಯೋಜನೆಯಲ್ಲಿ ಡಾಂಬರು ರಸ್ತೆ ಮಾಡುವ ಭರವಸೆಯನ್ನೂ ನೀಡಿದರು.
ರೈತರಿಗೆ ಯಾವುದೇ ಸಮಸ್ಯೆಯಾದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಸಮಾಜದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹಾವೇರಿ ಗ್ರಾಮೀಣ ಇನ್ಸ್ಪೆಕ್ಟರ್ ನಾಗಮ್ಮ ಕೆ. ಮತ್ತು ಪಿಎಸ್ಐ ಮಂಜುನಾಥ್ ಬಿ.ಎನ್. ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರು ಮತ್ತು ಗ್ರಾಮಸ್ಥರಾದಎಂ.ಎನ್. ನಾಯಕ್, ಹನುಮಂತಪ್ಪ ಹುಚ್ಚಣ್ಣನವರ್, ರಾಜು ತರ್ಲಘಟ್ಟ, ಚೆನ್ನಪ್ಪ ಮರಡೊರ, ಮುತ್ತು ಗುಡಗೇರಿ, ರುದ್ರಪ್ಪ ಬಳಿಗಾರ, ಮತ್ತು ನೂರ್ ಅಹಮದ್ ಮಲ್ಲ ಮುಂತಾದವರು ಇದ್ದರು.