ಹಾವೇರಿ: ನೆಚ್ಚಿನ ಸಿನಿಮಾ ನಾಯಕ ನಟರ ಕಟೌಟ್ಗಳಿಗೆ ಹಾಲಿನ ಅಭಿಷೇಕ, ಹೂವಿನ ಹಾರ ಹಾಕಿ ಸಂಭ್ರಮಿಸುವುದು ಸರ್ವೇ ಸಾಮಾನ್ಯ. ಆದರೆ, ನಗರದ ಮಾಗಾವಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ‘ಯುವರತ್ನ’ ಚಿತ್ರದಿಂದ ಸ್ಫೂರ್ತಿ ಪಡೆದ ಅಪ್ಪು ಅಭಿಮಾನಿಗಳು ವಿದ್ಯಾದಾನ ಮಾಡಿದ ಶಿಕ್ಷಕರನ್ನು ಶನಿವಾರ ಚಿತ್ರಮಂದಿರಕ್ಕೆ ಕರೆಸಿ ಸನ್ಮಾನಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದರು.
ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಗಟ್ಟಿಯಾದ ಕಥಾವಸ್ತು ಹಾಗೂ ಕಲಾವಿದರ ಭಾವಪೂರ್ಣ ಅಭಿನಯ ನಮ್ಮ ಮನ ಗೆದ್ದಿದೆ.ಶಿಕ್ಷಣ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸುವ ಜೊತೆಗೆ ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯನ್ನು, ಪೋಷಕರ ಕರ್ತವ್ಯವನ್ನು ತಿಳಿಸುತ್ತದೆ. ಮನರಂಜನೆಗೆ ಸೀಮಿತವಾಗದೇ ಉತ್ತಮ ‘ಸಾಮಾಜಿಕ ಸಂದೇಶ’ ನೀಡುವ ಈ ಚಿತ್ರದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರನ್ನು ಸನ್ಮಾನಿಸಿದ್ದೇವೆ ಎಂದು ಅಭಿಮಾನಿಗಳು ಹೇಳಿದರು.
ಉಪನ್ಯಾಕರಾದ ಪ್ರಮೋದ ನಲವಾಗಿಲು, ಶಿಕ್ಷಕರಾದ ಗೋವಿಂದಪ್ಪ ದೊಡ್ಡಮನಿ, ಮಾಲತೇಶ ದೇವಸೂರು, ನಾಗಭೂಷಣ ಅವರನ್ನು ಸನ್ಮಾನಿಸಲಾಯಿತು. ರಾಜರತ್ನ ಅಪ್ಪು ಫ್ಯಾನ್ಸ್ ಅಸೂಸಿಯೇಷನ್ ವತಿಯಿಂದ ರಾಘವೇಂದ್ರ ಬಸ್ತಿ, ಗಂಗಾಧರ ಕುಲಕರ್ಣಿ, ದುರಗಪ್ಪ ತಿಮ್ಮಾಪುರ, ಶಿವರಾಜ ತಿಮ್ಮಾಪುರ ಇತರರು ಶಿಕ್ಷಕರನ್ನು ಗೌರವಿಸಿದರು.