ಬ್ಯಾಡಗಿ: ಚೊಚ್ಚಲು ಗರ್ಭಿಣಿಯರಿಗೆ ಮಾಡುವ ಸೀಮಂತ ಕಾರ್ಯ ನಮ್ಮ ಸಂಸ್ಕೃತಿಯ ಪ್ರತೀಕ. ಜಾತಿ ಬೇಧವಿಲ್ಲದೇ ಎಲ್ಲ ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರವೇರಿಸುತ್ತಿರುವುದು ಶ್ಲಾಘನೀಯ. ಮಹಿಳೆಯರು ಮನೆ ಕೆಲಸ, ಕುಟುಂಬ ನಿರ್ವಹಣೆಯಂತಹ ಒತ್ತಡದ ನಡುವೆ ಆರೋಗ್ಯದತ್ತ ಗಮನ ಹರಿಸಬೇಕು’ ಎಂದು ಶ್ರೀಕ್ಷೇತ್ರ ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ನೆಹರೂ ನಗರದ ದಾನಮ್ಮದೇವಿಯ 12ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ 120 ಚೊಚ್ಚಲು ಗರ್ಭಿಣಿಯರ ಸೀಮಂತ ಕಾರ್ಯ ಹಾಗೂ ಹಿರಿಯ ನಾಗರಿಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮೈಸೂರು ರಾಮಕೃಷ್ಣ ಆಶ್ರಮದ ಕಿರಣ ಗುರೂಜಿ ಹಾಗೂ ಸಹೋದರಿ ಉಮಾ ಮಾತನಾಡಿ, ‘9 ತಿಂಗಳು ಗರ್ಭದಲ್ಲಿಟ್ಟುಕೊಂಡು ಶಿಶುವನ್ನು ಪೋಷಿಸುವ ಮಹಿಳೆಯ ತ್ಯಾಗ, ಸಹನಶೀಲತೆ ಅಗಾಧ. ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದರು.
ಎಲ್ಲ ಗರ್ಭಿಣಿಯರಿಗೆ ‘ಗರ್ಭ ಸಂಸ್ಕಾರ’ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ರಾಜ್ಯದ ವಿವಿಧ ಸ್ಥಳಗಳಿಂದ ಬಂದಿದ್ದ ತುಂಬು ಗರ್ಭಿಣಿಯರಿಗೆ ಮಹಿಳೆಯರಿಗೆ ಹಸಿರು ಬಳೆ, ಹಸಿರು ಸೀರೆ, ಹೂವು ಮುಡಿಸಿ ವಿವಿಧ ತಿನಿಸುಗಳನ್ನು ನೀಡಿದರು.
ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ದಾನಮ್ಮದೇವಿ ದೇವಸ್ಥಾನದ ಅಧ್ಯಕ್ಷೆ ಮಹೇಶ್ವರಿ ಪಸಾರದ, ಗೌರವಾಧ್ಯಕ್ಷೆ ಶಶಿಕಲಾ ಪಾಟೀಲ, ಉಪಾಧ್ಯಕ್ಷೆ ಕೆ.ಶಾರದಮ್ಮ, ಕಾರ್ಯದರ್ಶಿ ಅನುರಾಧಾ ಮೋರಿಗೇರಿ, ಸದಸ್ಯರಾದ ಗಿರಿಜಾ ನಿಡಗುಂದಿ, ಸವಿತಾ ಹಂಜಿ, ಸಕ್ರೀಯ ಸೇವಾ ಕಾರ್ಯಕರ್ತರು ಇದ್ದರು.