ಬಳಿಕ 'ಪ್ರಜಾವಾಣಿ' ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ, '2 ಬಾರಿ ಕ್ಷೇತ್ರದ ಶಾಸಕನಾಗಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದೇನೆ. ಸಕ್ರಿಯ ರಾಜಕೀಯ ಸಾಕು ಎನ್ನುವ ತೀರ್ಮಾನವನ್ನು ಕೈಗೊಂಡು 2018ರ ಚುನಾವಣೆಗೆ ಸ್ಪರ್ಧಿಸದೇ ಬಿ.ಸಿ.ಪಾಟೀಲ ಅವರಿಗೆ ಬೆಂಬಲಿಸಿದ್ದೆ. ಅವರು ಪಕ್ಷ ತೊರೆದು ಹೋದ ಮೇಲೆ ರಾಜ್ಯ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಈ ಉಪ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಆರಂಭದಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ತುಂಬಾ ಉತ್ತಮ ವಾತಾವರಣ ಇತ್ತು. ತಾಲ್ಲೂಕಿನ ಹಳ್ಳಿಗಳಲ್ಲಿ 2 ಬಾರಿ ಸುತ್ತಾಡಿದಾಗ ಅಚ್ಚರಿ ಎನ್ನುವಂತಹ ಜನಬೆಂಬಲ ಕಂಡು ಬಂದಿತ್ತು. ಕೊನೆಯ 2 ದಿನಗಳಲ್ಲಿ ಬಿಜೆಪಿಯವರು ನಡೆಸಿದ ಕಾರ್ಯಾಚರಣೆಯಿಂದ ಒಂದಿಷ್ಟು ಮತಗಳ ಗಳಿಕೆ ಕಡಿಮೆಯಾದರೂ ಗೆಲುವು ಖಂಡಿತ' ಎಂದು ತಿಳಿಸಿದರು.