ಹಿರೇಕೆರೂರು: ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೆಪದಲ್ಲಿ ರೈತರನ್ನ ಕಡೆಗಣಿಸಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ, ಬೆಳೆ ಹಾನಿ ಪರಿಹಾರ ನೀಡುವ ಕುರಿತು ಸರ್ಕಾರ ನಿರ್ಲಕ್ಷ ತೋರುತ್ತಿದ್ದು, ಇಂತ ಸರ್ಕಾರಕ್ಕೆ ಬಾರಕೋಲಿನ ಚಾಟಿ ಬಿಸ್ತಾ ಇದ್ದೇವೆ’ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು.
ಶುಕ್ರವಾರ ಪಟ್ಟಣದಲ್ಲಿ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ತಾಲ್ಲೂಕಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಅತಿ ಹೆಚ್ಚು ರೈತ ಆತ್ಮಹತ್ಯೆಗಳು ಆಗಿದ್ದವು. ಈ ವರ್ಷವೂ ಕೂಡಾ ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿವೆ. ಆದರೂ ಸರ್ಕಾರ ತಲೆ ಕೆಡಿಸಿಕೊಳ್ಳದೇ ಉದ್ಧಟತನ ತೋರಿಸುತ್ತಿದೆ ಎಂದು ದೂರಿದರು.
ತಾಲ್ಲೂಕಿನ ಆಡಳಿತದ ಬಗ್ಗೆ ಮಾತನಾಡಿದ ಅವರು, ‘ತಾಲ್ಲೂಕಿನ ಅಭಿವೃದ್ದಿ ವಿಷಯದಲ್ಲಿ ಅಡುಗೆ ಮಾಡಿ ಇಟ್ಟಿದ್ದೇವೆ ಇವರಿಗೆ ಉಣಿಸೋಕೆ ಆಗ್ತಾ ಇಲ್ಲಾ. ಇವರ ಕೈಯಲ್ಲಿ ತಾಲ್ಲೂಕಿನ ಕೆರಗಳಿಗೆ ನೀರು ತುಂಬಿಸೋಕೆ ಆಗ್ತಾ ಇಲ್ಲಾ. ಜನರಿಗೆ ಬಿಜೆಪಿ ಯೋಜನೆಗಳನ್ನು ತಲುಪಿಸುವಲ್ಲಿ ಈಗಿನ ಶಾಸಕರು ವಿಫಲರಾಗಿದ್ದಾರೆ. ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಜೊತೆಗೆ ಶಾಮೀಲಾಗಿದ್ದಾರೆ, ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಸೌಲಭ್ಯಗಳು ದೊರೆಯುತ್ತಿವೆ ಎಂದು ಆರೋಪಿಸಿದ ಅವರು, ಹೀಗೆ ಮುಂದುವರೆದರೆ ಯಾವ ರೀತಿ ಕ್ರಮ ತಗೆದುಕೊಳ್ಳಬೇಕು ಅಂತ ಗೊತ್ತಿದೆ ಎಂದು ಎಚ್ಚರಿಸಿದರು.
ಪಾಲಾಕ್ಷಗೌಡ ಪಾಟೀಲ, ಡಿ.ಸಿ.ಪಾಟೀಲ, ಸೃಷ್ಠಿ ಪಾಟೀಲ, ಶಿವಕುಮಾರ ತಿಪ್ಪಶೇಟ್ಟಿ, ದೇವರಾಜ ನಾಗಣ್ಣನವರ, ಎನ್.ಎಮ್.ಈಟೇರ, ಪರಮೇಶಪ್ಪ ಹಲಗೇರಿ, ಆರ್.ಎನ್.ಗಂಗೋಳ, ಪ್ರಕಾಶಗೌಡ ಪಾಟೀಲ ಹಾಗೂ ರೈತ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.