ಶಿಗ್ಗಾವಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಅವರಿಂದ ಸೈಬರ್ ಖದೀಮರು ₹60 ಸಾವಿರ ದೋಚಿದ್ದಾರೆ.
ಕುಲಪತಿಯವರ ಮೊಬೈಲ್ಗೆ ಕರೆ ಮಾಡಿ, ನಾನು ಧಾರವಾಡದ ಎಸ್ಬಿಐ ಬ್ಯಾಂಕ್ ಉದ್ಯೋಗಿ ನವೀನಕುಮಾರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಫೋನ್ ಪೇಗೆ ಒಂದು ದಿನದ ವಹಿವಾಟು ಮಿತಿ ₹60 ಸಾವಿರವಿದ್ದು, ಇದನ್ನು ಮುಂದುವರಿಸಲು ನಾವು ನಿಮ್ಮ ಫೋನ್ ಪೇಗೆ ಒಂದು ಲಿಂಕ್ ಕಳುಹಿಸುತ್ತೇವೆ. ‘ಎಸ್’ ಎಂದು ಟೈಪ್ ಮಾಡಿ ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ಭಾಸ್ಕರ್ ಅವರು ಫೋನ್ ಪೇ ಆ್ಯಪ್ ತೆರೆದು, ಪಾಸ್ವರ್ಡ್ ಹಾಕಿದ್ದಾರೆ. ಕೂಡಲೇ ₹60,098 ಮೊತ್ತ ಅಕೌಂಟಿನಿಂದ ಡೆಬಿಟ್ ಆಗಿದೆ ಎಂದು ಮೆಸೇಜ್ ಬಂದಿದೆ. ನಂತರ ಭಾಸ್ಕರ್ ಅವರು ಕರೆ ಮಾಡಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ವಂಚನೆಯಾಗಿರುವುದು ಖಚಿತವಾದ ನಂತರ ಭಾಸ್ಕರ್ ಅವರು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.