ಸವಣೂರ: ಸಂಕ್ರಾಂತಿ ಹಬ್ಬದ ಆಚರಣೆಗೆಂದು ಬಂದು ವರದಾ ನದಿಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ಈಜು ಬಾರದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಕಳಸೂರ ಗ್ರಾಮದ ನದಿಯ ದಡದಲ್ಲಿ ನಡೆದಿದೆ.
ನದಿಯಲ್ಲಿ ಮುಳುಗಿದ ಯುವಕ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ನಾಗರಮಡವು ಗ್ರಾಮದ ಮಹೇಶ ಲಕ್ಷ್ಮಣ ಸುರಣಗಿ ಎಂದು ತಿಳಿದು ಬರುತ್ತಿದ್ದು, ಸಂಕ್ರಾಂತಿ ಹಬ್ಬಕ್ಕೆಂದು ಹಾವೇರಿ ನಗರದ ಪುರದ ಓಣಿಯಲ್ಲಿನ ಅಕ್ಕನ ಮನೆಗೆ ಆಚರಣೆಗೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ನೀರಲ್ಲಿ ಮುಳುಗಿದ ಯುವಕನ ಪತ್ತೆಗಾಗಿ ಹಾವೇರಿ ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಶೋಧಕಾರ್ಯ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.