ಹಾವೇರಿ: ದ್ಯಾಮವ್ವ ದೇವಿ ಜಾತ್ರೆ ಅಂಗವಾಗಿ ನಡೆದ ಮೆರವಣಿಗೆ ಸಂದರ್ಭ ಪಟಾಕಿ ಸಿಡಿಸುವಾಗ ತಗುಲಿದ ಬೆಂಕಿಯ ಕಿಡಿಗೆ ಜೋಳದ ಬಣವೆ ಸುಟ್ಟು ಸುಮಾರು ₹25 ಸಾವಿರ ನಷ್ಟವಾಗಿದೆ.
ನಾಗಪ್ಪ ಕೊಪ್ಪದ ಎಂಬುವರು ಜೋಳದ ಬಣವೆಯನ್ನು ರಸ್ತೆ ಬದಿ ಹಾಕಿಕೊಂಡಿದ್ದರು. ಪಟಾಕಿ ಸರವನ್ನು ಹಚ್ಚಿದ ವೇಳೆ ಅಗ್ನಿಸ್ಪರ್ಶವಾಗಿ ಬಣವೆ ಹೊತ್ತಿಕೊಂಡಿತು. ದಟ್ಟ ಹೊಗೆ ಕಾಣುತ್ತಿದ್ದಂತೆ ಸ್ಥಳೀಯರು ಮತ್ತು ಕುಟುಂಬದವರು ಬಿಂದಿಗೆ ಮತ್ತು ಪೈಪುಗಳ ಮೂಲಕ ನೀರು ಎರಚಿದರು. ಪಕ್ಕದಲ್ಲೇ ಇದ್ದ ತೆಂಗಿನ ಮರದ ಗರಿಗೂ ಬೆಂಕಿ ತಗುಲಿತು.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಸಂಪೂರ್ಣ ನಂದಿಸಿದರು. ಇದರಿಂದ ಪಕ್ಕದಲ್ಲೇ ಇದ್ದ ಮನೆ ಮತ್ತು ಮರಗಳಿಗೆ ಬೆಂಕಿ ಹರಡುವುದು ತಪ್ಪಿತು. ಮೆರವಣಿಗೆಗೆ ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಬೆಂಕಿಯ ಸ್ಪರ್ಶ ಮತ್ತು ನೀರು ಸಿಂಪಡಣೆಯಿಂದ ಜೋಳದ ದಂಟು ಹಾಳಾಗಿದೆ. ಇದನ್ನು ಜಾನುವಾರುಗಳು ತಿನ್ನುವುದಿಲ್ಲ ಎಂದು ಕುಟುಂಬದವರು ಅಳಲು ತೋಡಿಕೊಂಡರು.