ಹಾವೇರಿ: ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳ ಮಧ್ಯೆ ದೀಪೋತ್ಸವ ಆಚರಿಸುವ ಮೂಲಕ ಕನಸಿನ ಹಾವೇರಿ ತಂಡ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.
ಇಲ್ಲಿಯ ಹಾನಗಲ್ಲ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆ ಮಧ್ಯೆ ಬಿದ್ದಿರುವ ದೊಡ್ಡ ಗುಂಡಿಗಳ ಮಧ್ಯೆ ಸೋಮವಾರ ಸಂಜೆ ದೀಪ ಹಚ್ಚಿ ದೀಪೋತ್ಸವ ಆಚರಿಸಲಾಯಿತು.
ಕನಸಿನ ತಂಡದ ಅಭಿಷೇಕ ಉಪ್ಪಿನ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥದಿಂದ ಷಟ್ಪಥ ಮಾಡಲಾಗಿದೆ. ಆದರೆ, ಮೂರು ವರ್ಷಗಳಿಂದ ಸೇವಾ ರಸ್ತೆಯನ್ನು ದುರಸ್ತಿ ಮಾಡಿಲ್ಲ. ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದು ವಾಹನ ಸಂಚಾರವೇ ಸಾಧ್ಯವಿಲ್ಲದಂತಾಗಿದೆ. ಇದರಿಂದ ಅನೇಕ ವಾಹನಗಳು ಗುಂಡಿ ಮಧ್ಯೆ ಸಿಲುಕಿಕೊಂಡು ಹಾಳಾದ ಉದಾಹರಣೆಗಳಿವೆ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಧಮ್ಮು, ತಾಕತ್ತು ಇದ್ದರೆ ಬಿಜೆಪಿಯ ಜನಸ್ಪಂದನ ಯಾತ್ರೆಯನ್ನು ಸವಾಲು ಹಾಕಿದ್ದಾರೆ. ಅದಕ್ಕೂ ಮುನ್ನ ಸಿಎಂ ತವರು ಜಿಲ್ಲೆಯ ರಸ್ತೆಗಳನ್ನು ದುರಸ್ತಿ ಮಾಡಿ ಜಿಲ್ಲೆಯ 6 ಕ್ಷೇತ್ರಗಳನ್ನು ಗೆದ್ದು ಟಾರ್ಗೆಟ್ 150 ತಲುಪಲಿ ಎಂದು ಕುಟುಕಿದರು.
ಜಿಲ್ಲಾ ಕೇಂದ್ರ ಹಾವೇರಿಯಿಂದ ಬೆಂಗಳೂರು ಕಡೆಗೆ, ಹುಬ್ಬಳ್ಳಿ ಕಡೆ ಹೋಗುವ ಎಲ್ಲಾ ಸರ್ವೀಸ್ ರಸ್ತೆಗಳು ಸಂಪೂರ್ಣ ಕೆಟ್ಟಿವೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಗಮನ ಸೆಳೆಯುವ ನಿಟ್ಟಿನಲ್ಲಿ ದೀಪೋತ್ಸವ ಆಚರಿಸಿದ್ದೇವೆ ಎಂದು ಹೇಳಿದರು.