ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಏರಿಕೆ ಖಂಡಿಸಿ ಪ್ರತಿಭಟನೆ

Last Updated 11 ಫೆಬ್ರುವರಿ 2021, 10:23 IST
ಅಕ್ಷರ ಗಾತ್ರ

ಹಾವೇರಿ: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೋವಿಡ್‌ ಲಾಕ್‌ಡೌನ್‌ನಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಂದರ್ಭದಲ್ಲಿ ಇಂಧನ ದರಗಳನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸಿದೆ. ಕೃಷಿ ಕಾರ್ಮಿಕರು, ಬಡವರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಟ್ರ್ಯಾಕ್ಟರ್‌ ಬಳಕೆ ಮಾಡುತ್ತಾರೆ. ಇಂಧನ ದರ ಏರಿಕೆಯಾಗಿರುವುದರಿಂದ ಕೃಷಿ ಪ್ರಗತಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಬೆಲೆ ನಿಯಂತ್ರಿಸಬೇಕು, ಟ್ರ್ಯಾಕ್ಟರ್‌ ಹೊಂದಿದ ರೈತರಿಗೆ ಪ್ರತಿ ಲೀಟರ್‌ ಇಂಧನಕ್ಕೆ ₹25ರಂತೆ ಸಹಾಯಧನ ನೀಡಬೇಕು, ದಿನಸಿ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕು. ಬಡವರು ನೆಮ್ಮದಿಯಾಗಿ ಜೀವನ ಮಾಡುವುದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಎಸ್‌. ಸಿದ್ದಬಸಪ್ಪ ಯಾದವ, ಮಾಲತೇಶ ಬೇವಿನಹಿಂಡಿ, ಕೆ.ಎಂ. ಸುಂಕದ,ಎಸ್.ಎಸ್.ಕಳ್ಳಿಮನಿ, ಎಸ್.ಎಲ್. ಕಾಡದೇವರಮಠ, ಸೈಯದ ಜಮಾದಾರ, ಸುನೀಲ ದಂಡೆಮ್ಮನವರ, ಅಮೀರಜಾನ ಬೇಪಾರಿ, ಮಾಂತೇಶ ಬೇವಿನಹಿಂಡಿ, ಮಲ್ಲಿಕಾರ್ಜುನ ಅರಳಿ, ಖಾಲಿ ಅಲಿ ಪಟೇಲ, ಖಲೀಲ್‌ ಅಹ್ಮದ್‌ ಹುಲಗೇರಿ, ಐ. ಮಕಾನದಾರ, ಮಂಜುರಿ ಅಹ್ಮದ ಆಲೂರ, ಮುತ್ತಯ್ಯ ಚಿನ್ನಿಕಟ್ಟಿ, ಐ.ಹುಬ್ಬಳ್ಳಿ, ರಜಾಕ ಕೊಕ್ಕರಗುಂದಿ, ಮೆಹಬೂಬಜಮಾದಾರ, ಚನ್ನಬಸಪ್ಪ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT