ರಾಣೆಬೆನ್ನೂರು: ಕಾರ್ಮಿಕರ ಕಿಟ್ ವಿತರಣೆಯಲ್ಲಿ ಆದ ಅವ್ಯವಹಾರದ ಸಮಗ್ರ ತನಿಖೆಗೆ ತಾಲ್ಲೂಕು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕ ಹಾಗೂ ತಾಲ್ಲೂಕು ಕಾರ್ಮಿಕರ ಒಕ್ಕೂಟಗಳ ಪದಾಧಿಕಾರಿಗಳು ಸೋಮವಾರ ಆಗ್ರಹಿಸಿದರು.
ಕಾರ್ಮಿಕರ ಸಂಘಟನೆಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಶಂಕರ್ ಜಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಯುವ ಮುಖಂಡ ಪ್ರಕಾಶ ಕೋಳಿವಾಡ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೇ ತೊಂದರೆಗೀಡಾದ ಕಾರ್ಮಿಕರಿಗೆ ವಿತರಣೆ ಮಾಡಲು ರಾಜ್ಯ ಸರ್ಕಾರದಿಂದ 8 ಸಾವಿರ ಕಿಟ್ಗಳು ಬಂದಿದ್ದವು. ನಮ್ಮ ಸಂಘಟನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ನೀಡದೆ ಸ್ಥಳೀಯ ಕಾರ್ಮಿಕದಲ್ಲದವರಿಗೆ ಮತ್ತು ನೋಂದಾಯಿತ ಕಾರ್ಮಿಕದಲ್ಲದವರಿಗೆ ಕಿಟ್ ವಿತರಿಸಿದ್ದಾರೆ ಎಂದು ಆರೋಪಿಸಿದರು.
ಕಿಟ್ ವಿತರಣೆಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಅನ್ಯಾಯವಾಗಿದೆ. ನಿಜವಾದ ಕಾರ್ಮಿಕರಿಗೆ ಕಿಟ್ಗಳು ತಲುಪಿಲ್ಲ. ಇದರಲ್ಲಿ ಶಾಸಕರಿಗೆ ಬೇಕಾದವರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ದೂರಿದರು.
ಕಿಟ್ ವಿತರಣೆಯಲ್ಲಿ ಆದ ಅವ್ಯವಹಾರಕ್ಕೆ ಕಾರಣವಾದವರ ವಿರುದ್ಧ ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.