ಹಾವೇರಿ: ತಾಲ್ಲೂಕಿನಗಾಂಧಿಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಈ ಕಾಲೇಜಿಗೆ ಬರುತ್ತಾರೆ. ಅವರಿಗೆ ಕಾಲೇಜಿಗೆ ಬರಲು ಮತ್ತು ಹೋಗಲು ಸರಿಯಾದ ಸಮಯದಲ್ಲಿ ಬಸ್ಸಿನ ವ್ಯವಸ್ಥೆ ಇಲ್ಲ. ಹಾವೇರಿ–ಗಾಂಧಿಪುರ ಮಾರ್ಗಕ್ಕೆ ಹೆಚ್ಚಿನ ಬಸ್ಸುಗಳನ್ನು ಬಿಡಬೇಕು ಎಂದು ಮನವಿ ಮಾಡಿದರು.
ಹೂವಿನಹಡಗಲಿಯಿಂದ ಹಾವೇರಿ ಮಾರ್ಗವಾಗಿ ತೆರಳುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಂಡಳಿಯ ಬಸ್ಸುಗಳನ್ನು ಗಾಂಧಿಪುರ ಕಾಲೇಜು ಬಳಿ ನಿಲುಗಡೆ ಮಾಡಬೇಕು ಹಾಗೂ ವಿದ್ಯಾರ್ಥಿಗಳಿಗೆ ಹತ್ತಲು ಅವಕಾಶ ಕಲ್ಪಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕರಾದ ಗಂಗಾಧರ ಕುಲಕರ್ಣಿ, ತಾಲ್ಲೂಕು ಸಂಚಾಲಕ ವಿಶ್ವನಾಥ್, ತಾಲ್ಲೂಕು ಸಹಸಂಚಾಲಕ ಮೇಘನಾಥ, ನಗರ ಕಾರ್ಯದರ್ಶಿ ಸಂತೋಷ್, ವರುಣ, ರೋಹನ್, ಕಾರ್ತಿಕ್, ಸಿದ್ದು, ಪ್ರಸನ್ನ ಕೋರಿ, ಲಿಂಗರಾಜ ಇದ್ದರು.