ಹಾವೇರಿ:ಕೇಂದ್ರ ಸರ್ಕಾರವು ಮಂಡಿಸಿರುವ ಲಿಂಗ ಪರಿವರ್ತಿತರ (ಹಕ್ಕುಗಳ ರಕ್ಷಣೆ) ಮತ್ತು ಮಾನವ ಸಾಗಾಣೆ (ತಡೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆಗಳಲ್ಲಿ ಲೋಪಗಳಿವೆ ಎಂದು ಆರೋಪಿಸಿ ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಮಾತನಾಡಿ,‘ನೋಡಿ ಸ್ವಾಮಿ ನಾವಿರೋದು ಹೀಗೆ. ನಮ್ಮ ದೇಹವು ನಮ್ಮ ಹಕ್ಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ ಬಿಟ್ಟು ‘ಜನ್ ಕೀ ಬಾತ್’ ಕುರಿತು ಮಾತನಾಡಬೇಕು. ಜನಪರ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರಧಾನಿಯವರು ಮಾನವ ಹಕ್ಕು, ಸಂವಿಧಾನದ ತತ್ವ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ಅಲ್ಪ ಸಂಖ್ಯಾತರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮಸೂದೆಯನ್ನು ಮಂಡಿಸಬೇಕು. ಇಲ್ಲವೇ, ಮಸೂದೆ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಮಸೂದೆ ಮಂಡನೆಗೆ ಸಂಸತ್ತಿನ ಸ್ಥಾಯಿ ಸಮಿತಿಯ ಶಿಫಾರಸು ಪಡೆಯಲಿಲ್ಲ. ಸಮುದಾಯದ ಅಭಿಪ್ರಾಯ ಮತ್ತು ಹಿತಾಸಕ್ತಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೇ, ಈ ಮಸೂದೆಯಲ್ಲಿ ಹಲವಾರು ತೊಡಕುಗಳಿವೆ ಎಂದು ಆರೋಪಿಸಿದರು.
ಈ ಕಾಯಿದೆಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ. ಇದನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಆಗಲು ಬಿಡಬಾರದು. ಬದಲಾಗಿ, ರಾಜ್ಯಸಭೆಯ ವಿಶೇಷ ಸಮಿತಿ ರಚಿಸಿ, ಮಸೂದೆಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಸೂಕ್ತ ಸಮಾಲೋಚನೆ, ಸಮುದಾಯದ ಬೇಡಿಕೆ, ಹಿತಾಸಕ್ತಿ, ಶಿಪಾರಸುಗಳನ್ನು ಪರಿಗಣಿಸಿ ಮಸೂದೆಗಳನ್ನು ಜಾರಿಗೆ ತರಬೇಕು. ಸುಪ್ರೀಂ ಕೋರ್ಟ್ ಆದೇಶ, ಸಂವಿಧಾನದ ತತ್ವಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ತನುಶ್ರೀ ಯು.ಡಿ., ಮಹಮ್ಮದ್, ಸಾದಿಕ್, ವಕೀಲ ನಾಗರಾಜ ಎಚ್. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೊನ್ನಪ್ಪ ತಗಡಿನಮನಿ, ಸಂಜೀವ ಗಾಂಧಿ, ಎಸ್ಎಫ್ಐಯ ಬಸವರಾಜ ಬೋವಿ ಇದ್ದರು.