ಹಿರೇಕೆರೂರ: ‘ಸಮಾಜವನ್ನು ಸತ್ಯದ ಕಡೆಗೆ ಕರೆದುಕೊಂಡು ಹೋದ ಮಹಾತಾಯಿ ಹೇಮರಡ್ಡಿ ಮಲ್ಲಮ್ಮ’ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲ್ಲೂಕು ಆಡಳಿತದಿಂದ ಇಲ್ಲಿನ ಸರ್ವಜ್ಞ ಕಲಾ ಭವನದಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.
‘ಇತರರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರ ಬದುಕು ಸಾರ್ಥಕ. ಟಿವಿ, ಮೊಬೈಲ್ ಹಾವಳಿಯಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಹಾಗೂ ದಾಂಪತ್ಯ ಸಂಬಂಧಗಳು ಹದಗೆಡುತ್ತಿರುವ ಈ ಸನ್ನಿವೇಶದಲ್ಲಿ ಸಾಧ್ವಿ ಮಲ್ಲಮ್ಮನ ಬದುಕು ಆದರ್ಶಪ್ರಾಯ’ ಎಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಎ.ವಿ.ಶಿಗ್ಗಾವಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪ್ರಕಾಶ ಬನ್ನಿಕೋಡ, ಎನ್.ಎಂ.ಈಟೇರ, ಎಸ್.ಕೆ.ಕರಿಯಣ್ಣನವರ, ಸುಮಿತ್ರಾ ಪಾಟೀಲ, ಬಂಗಾರಪ್ಪ ಇಕ್ಕೇರಿ, ರೆಡ್ಡಿ ಸಮಾಜದ ಅಧ್ಯಕ್ಷ ಹೇಮಣ್ಣ ಮುದಿರೆಡ್ಡಿ, ಉಪನ್ಯಾಸಕ ಕಾಂತೇಶ ಅಂಬಿಗೇರ ಉಪಸ್ಥಿತರಿದ್ದರು. ಮೇಘರಾಜ ಮಾಳಗಿಮನಿ ನಿರೂಪಿಸಿದರು.
ಇದಕ್ಕೂ ಮೊದಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರ ಮೆರವಣಿಗೆ ಅತ್ಯಂತ ವೈಭವದಿಂದ ನಡೆಯಿತು. ಶಾಸಕ ಯು.ಬಿ.ಬಣಕಾರ ಪಾಲ್ಗೊಂಡಿದ್ದರು.
‘ಮಲ್ಲಮ್ಮ ಸಾಧನೆ ಅನುಕರಣೀಯ’
ಸವಣೂರ: ‘ಮಲ್ಲಮ್ಮನಂಥ ಶಿವಶರಣೆಯ ಸಾಧನೆಗಳ ಕುರಿತು ಮಕ್ಕಳಿಗೆ ಪ್ರೇರೇಪಿಸಿದರೆ, ಸಮಾಜ ಸುಧಾರಣೆ ಸಾಧ್ಯ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಲ್ಲಮ್ಮ ಮಾಡಿದ ತ್ಯಾಗ, ಸಾಧನೆ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಈ ಜಯಂತಿ ಕಾರ್ಯಕ್ರಮ ಶ್ಲಾಘನೀಯ. ಮಲ್ಲಮನ ಪವಾಡದ ಕುರಿತು ಶಾಲೆ ಪಠ್ಯ–ಪುಸ್ತಕದಲ್ಲಿ ಅಳವಡಿಸುವ ಅಗತ್ಯವಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶಿವರಾಜ ಅಮರಾಪೂರ, ಉಪವಿಭಾಧಿಕಾರಿ ಸಿದ್ದು ಹುಲ್ಲೋಳ್ಳಿ, ಎಪಿಎಂಸಿ ಅಧ್ಯಕ್ಷ ದುಂಡಪ್ಪ ಗುಡಗೇರಿ ಇದ್ದರು.