ಕಮಲಾಪುರ: ಕಲಬುರಗಿ ನಗರ ಸಮೀಪದ ಹುಣಸಿ ಹಡಗಿಲಿ ಬಳಿ ಇತ್ತೀಚೆಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ಗಂಭೀರ ಗಾಯಗೊಂಡಿದ್ದ ಕಮಲಾಪುರ ತಾಲ್ಲೂಕಿನ ಕಣ್ಣೂರ ಗ್ರಾಮದ ನಿವಾಸಿ ಮಧುಕರ ಸಿದ್ದಣ್ಣ (38) ಅವರು ಶನಿವಾರ ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜೂನ್ 20 ರಂದು ತಮ್ಮ ಪತ್ನಿಯನ್ನು ಅಫಜಲಪುರ ತಾಲ್ಲೂಕಿನ ಬಳೂರ್ಗಿಗೆ ಬಿಟ್ಟು ಬೈಕ್ನಲ್ಲಿ ಕಲಬುರಗಿಯತ್ತ ಬರುತ್ತಿದ್ದ ವೇಳೆ ಹುಣಸಿ ಹಡಗಿಲಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯ ಗೊಂಡಿದ್ದ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ನಂತರ ಹೈದರಾಬಾದ್ ಕಿಮ್ಸ್ಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಬೆಳಗಿನ ಜಾವ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಜಯಪುರದ ಇಂಡಿ ಪಟ್ಟಣದ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದ ಮಧುಕರ ಸಿದ್ದಣ್ಣ, ಇತ್ತೀಚೆಗೆ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದ ಅವರಿಗೆ ಚೆನ್ನೈಗೆ ವರ್ಗಾವಣೆಯಾಗಿತ್ತು. ಚೆನ್ನೈಗೆ ಪ್ರಯಾಣ ಬೆಳೆಸಬೇಕಿದ್ದ ಜೂನ್ 20ರಂದೇ ಈ ದುರ್ಘಟನೆ ನಡೆದಿದೆ.
ಮೃತರಿಗೆ ತಂದೆ, ತಾಯಿ, ಪತ್ನಿ, ಪುತ್ರ ಇದ್ದಾರೆ. ಅಂತ್ಯಕ್ರಿಯೆಯು ಭಾನುವಾರ (ಜೂ.26) ಬೆಳಿಗ್ಗೆ 10ಕ್ಕೆ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.