ಆಳಂದ: ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳಂದ ತಾಲ್ಲೂಕಿನ 11 ಜನ ಪ್ರಗತಿಪರ ರೈತರನ್ನು ಕೃಷಿ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರ ರುಕ್ಕಯ್ಯ ಗುತ್ತೇದಾರ ಅವರ 11ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಡಿ.23ರಂದು ತಡಕಲ ಗ್ರಾಮದ ಜೀವನಜ್ಯೋತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಗ್ಗೆ 11ಕ್ಕೆ ರೈತ ದಿನಾಚರಣೆ, ವಿವಿಧ ಮಠಾಧೀಶರ ನೇತೃತ್ವದಲ್ಲಿ ಧರ್ಮಸಭೆ ಹಾಗೂ ಕೃಷಿ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದರು.
ನಂದಗಾಂವನ ರಾಜಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸುವರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಮಟ್ಟದ ಕೃಷಿ ಪಂಡಿತ ಪುರಸ್ಕೃತ ಮಧುಕೇಶ್ವರ ಹೆಗಡೆ ಅವರಿಂದ ಜೇನು ಸಾಕಾಣಿಕೆ ಕುರಿತು ವಿಶೇಷ ಉಪನ್ಯಾಸ, ಸಂವಾದ ಏರ್ಪಡಿಸಲಾಗಿದೆ ಎಂದರು.
ತಾಲ್ಲೂಕಿನ ವಿವಿಧ ಗ್ರಾಮದ ರೈತರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಪುತ್ಸಪ್ಪ ಬೆಳೆ ಪ್ರಮುಖ ಅಪ್ಪಾಸಾಬ ಗುಂಡೆ, ಕಸಾಪ ತಾಲ್ಲೂಕಾಧ್ಯಕ್ಷ ಹಣಮಂತ ಶೇರಿ, ಸಿದ್ದಾರೂಡ ಬುಜರ್ಕೆ, ಸಿದ್ದುಗೌಡ ಪಾಟೀಲ, ಜಯಾನಂದ ಬಿರಾದಾರ ಪಾಲ್ಗೊಂಡಿದ್ದರು.