ಕಲಬುರಗಿ: ವಿ.ಡಿ.ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಾಗ ಮಹಾತ್ಮ ಗಾಂಧೀಜಿ ದೇಶಕ್ಕೆ ಮರಳಿ ಬಂದಿರಲಿಲ್ಲ. ಗಾಂಧೀಜಿ ಆಫ್ರಿಕಾದಿಂದ ದೇಶಕ್ಕೆ ಬರುವ ಮುಂಚೆಯೇ ಸಾವರ್ಕರ್ ಜೈಲಿನಿಂದ ಕ್ಷಮಾಪಣೆ ಪತ್ರ ಬರೆದಿದ್ದರು. ಆದರೆ, ಕ್ಷಮಾಪಣೆ ಪತ್ರ ಬರೆಯುಂತೆ ಗಾಂಧೀಜಿ ಸಲಹೆ ನೀಡಿದ್ದರು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ದು ಯಾರು ಎಂದು ಅಖಿಲ ಭಾರತ ಮಜ್ಲಿಸ್ ಇತ್ತೇಹಾದ್ ಉಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ರಿಂಗ್ ರಸ್ತೆಯ ಮೆಟ್ರೊ ಪ್ಯಾಲೇಸ್ ಫಂಕ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 1911ರಲ್ಲಿ ಸಾರ್ವಕರ್ ಮೊದಲ ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ಬರೆದಿದ್ದರು. 1912ರಲ್ಲಿ ಎರಡನೇ ಕ್ಷಮಾಪಣೆ ಪತ್ರ ಬರೆದಿದ್ದರು. ಈ ಎರಡೂ ಸಂದರ್ಭದಲ್ಲೂ ಗಾಂಧೀಜಿ ದೇಶದಲ್ಲೇ ಇರಲಿಲ್ಲ. ಗಾಂಧೀಜಿ ಭಾರತಕ್ಕೆ ಬಂದಿದ್ದೇ 1915ರ ಜ 9ರಂದು. ಜೈಲಿಗೆ ಹೋಗುವುದೇ ಅಹಿಂಸೆಯ ದಾರಿ ಎಂದುಗಾಂಧೀಜಿ ಹೇಳಿದ್ದರು. ಅದೂ 1920ರಲ್ಲಿ ಸಾವರ್ಕರ್ಗೆ ಪತ್ರ ಬರೆಯಲು ಹೇಳಿದ್ದರು. ಆದರೆ, ಬಿಜೆಪಿಯವರು ಬರೀ ಸುಳ್ಳನ್ನೇ ಹರಿಡುವ ಕೆಲಸ ಮಾಡುತ್ತಿದ್ದಾರೆ. 1947ರಲ್ಲಿ ತಿರಂಗಾ ಒಪ್ಪುವುದಿಲ್ಲ ಎಂದು ಇದೇ ವ್ಯಕ್ತಿ ಹೇಳಿದ್ದರೋ, ಇಲ್ಲವೋ ಎಂದಾದರೂ ಬಿಜೆಪಿಯವರೇ ಹೇಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ವಿರುದ್ಧ ಒಟ್ಟಾಗಬೇಕು: ‘ಜಾತ್ಯತೀತ ಪಕ್ಷಗಳೆಂದು ಕರೆದುಕೊಳ್ಳುವವರೂ ಹಿಂದು ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಪಕ್ಷಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಕೊನೆಗೆ ಮುಸ್ಲಿಮರು ಎಲ್ಲಿ ಹೋಗುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ, ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರು ಒಟ್ಟಾಗಬೇಕಿದೆ ಎಂದು ಓವೈಸಿ ಹೇಳಿದರು.
‘ನಾನು ಕಾಂಗ್ರೆಸ್ ವಿರುದ್ಧ ಮಾತ್ರ ಮಾತನಾಡುತ್ತೇನೆ. ಬಿಜೆಪಿ ವಿರುದ್ಧ ಮಾತನಾಡಲ್ಲ ಎಂಬ ಆರೋಪಗಳಿವೆ. ಆದರೆ, ಸಂಸತ್ತಿನಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಅತಿ ಹೆಚ್ಚು ಟೀಕೆ ಮಾಡುವುದೇ ನಾನು. ಅದೇ ಸಂಸತ್ತಿನಲ್ಲಿ ಮೋದಿಯನ್ನು ಅಪ್ಪಿಕೊಂಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ’ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.