ಕಲಬುರಗಿ: ‘ಬದುಕಿನಲ್ಲಿ ಎದುರಾಗುವ ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ' ಎಂದು ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ವತಿಯಿದ ಕಲಾ ಮಂಡಲದಲ್ಲಿ ಹಮ್ಮಿಕೊಡಿದ್ದ ವರಕವಿ ದ.ರಾ. ಬೇಂದ್ರೆ ಜನ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಇಳಿದು ಬಾ ತಾಯಿ, ಇಳಿದು ಬಾ’ ಎಂದು ಬೇಂದ್ರೆಯವರು ಭಾರತದಲ್ಲಿ ಬರಗಾಲ ಆವರಿಸಿದಾಗ ಹಾಡನ್ನು ಹಾಡಿ ಮಳೆರಾಯನನ್ನು ಕರೆದಿದ್ದು ವಿಶೇಷವಾಗಿತ್ತು. ನೀ ಹಿಂಗ ನೋಡಬ್ಯಾಡ ನನ್ನ, ತಿರುಗಿ ನಾ ಹೆಂಗ ನೋಡಲಿ ನಿನ್ನ ಎಂದು ಮಗನ ಸಾವಿನ ಸಂದರ್ಭದಲ್ಲಿ ತನ್ನ ಮಡದಿಗೆ ಹಾಡಿದಂಥ ಹಾಡು ಇಂದಿಗೂ ಪ್ರಸಿದ್ಧವಾಗಿದೆ’ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲವಾರಕರ್, ‘ದ.ರಾ. ಬೇಂದ್ರೆಯವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಅನೇಕ ಕವನ ಸಂಕಲನಗಳನ್ನು ರಚಿಸಿದ್ದಾರೆ. ಪ್ರತಿದಿನ ಬೇಂದ್ರೆಯವರನ್ನು ಓದುವುದರಿಂದ ಬದುಕಿನಲ್ಲಿ ಚೈತನ್ಯ ತುಂಬುತ್ತದೆ. ಜೀವನದಲ್ಲಿ ಬರುವ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಲಭಿಸುತ್ತದೆ’ ಎಂದರು.
ಸಾಹಿತಿ ರಾಜಶೇಖರ ಮಾಂಗ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಸಾಹಿತಿಗಳಿಗೆ ದ.ರಾ. ಬೇಂದ್ರೆ ಪ್ರಶಸ್ತಿ ಹಾಗೂ ಸಂಗೀತ ಸಾಧಕರಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.