ಚಿಂಚೋಳಿ: ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಡಾ.ದೀಪಕ್ ಪಾಟೀಲರಿಗೆ ಜಿಲ್ಲಾ ಆಡಳಿತವು ಉತ್ತಮ ಆರೋಗ್ಯಾಧಿಕಾರಿ ಪ್ರಶಸ್ತಿ ನೀಡಿದೆ.
ಜಿಲ್ಲೆಯಲ್ಲಿ ಕೋವಿಡ್-19 ಪತ್ತೆಗೆ ಅವಿರತವಾಗಿ ಶ್ರಮಿಸಿದ ಅವರು, 10 ಸಾವಿರಕ್ಕೂ ಹೆಚ್ಚಿನ ಮಾದರಿ ಸಂಗ್ರಹಿಸಿ ಕೋವಿಡ್ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು.
ಬಿ.ಶರತ್ ಜಿಲ್ಲಾಧಿಕಾರಿ ಆಗಿದ್ದಾಗಲೇ ಈ ಪ್ರಶಸ್ತಿಪತ್ರ ಬಂದಿದೆ. ಆದರೆ ಆಗ ಡಾ.ದೀಪಕ್ ಪಾಟೀಲರಿಗೆ ಕೋವಿಡ್-19 ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ವಿವೇಕಾನಂದರೆಡ್ಡಿ ಅವರು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
‘ನನಗೆ ಪ್ರಶಸ್ತಿ ಬಂದಿದ್ದು ಖುಷಿ ತಂದಿದೆ. ಆದರೆ ಇದರಲ್ಲಿ ನನ್ನೊಬ್ಬನ ಸೇವೆಯಲ್ಲ; ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರ ಪಾತ್ರವೂ ಇದೆ ಎಂದು ಡಾ.ದೀಪಕ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.