ಚಿಂಚೋಳಿ: ಗರ್ಭಿಣಿಯರಿಗೆ, ಅಪಘಾತದ ಗಾಯಾಳುವಿಗೆ ಮತ್ತು ತುರ್ತು ಶಸ್ತ್ರ ಚಿಕಿತ್ಸೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ಆಪತ್ಕಾಲದಲ್ಲಿ ರಕ್ತದಾನ ಮಾಡಿದರೆ, ಇನ್ನೊಬ್ಬರ ಜೀವ ಉಳಿಸಿದ ಬಗ್ಗೆ ಹೆಮ್ಮೆ ಮತ್ತು ಸೇವಾ ಮನೋಭಾವ ವೃದ್ಧಿಸುತ್ತದೆ ಎಂದು ಆರೋಗ್ಯ ಇಲಾಖೆಯ ನಿವೃತ್ತ ಸಹ ನಿರ್ದೆಶಕ ಡಾ.ಶಿವರಾಜ ಸಜ್ಜನಶೆಟ್ಟಿ ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಸಹಯೋಗದಲ್ಲಿ ರಾಮ ಜನ್ಮಭೂಮಿ ಹೋರಾಟದಲ್ಲಿ ಮಡಿದ ಕರ ಸೇವಕರ ಸ್ಮರಣೆ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವಕರು ದಾರಿ ತಪ್ಪುತ್ತಿದ್ದಾರೆ ಎಂಬ ಆರೋಪ ಕೇಳುವ ಸಮಯದಲ್ಲಿ ಯುವಜನರು ಸಮಾಜಮುಖಿ ಕಾರ್ಯದಲ್ಲಿ ತೊಡಗುವುದರ ಜತೆಗೆ ಇತರರಿಗೆ ಪ್ರೇರಣೆ ನೀಡುವ ಯುವಕರನ್ನು ಒಗ್ಗೂಡಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗುವಂತೆ ಮಾಡಲು ಇದು ಸಹಕಾರಿಯಾಗಿದೆ ಎಂದರು.
ಆರ್ಎಸ್ಎಸ್ ಜಿಲ್ಲಾ ಸಂಘದ ಸಂಚಾಲಕ ಅಶೋಕ ಪಾಟೀಲ ಮಾತನಾಡಿ, ರಾಮಜನ್ಮಭೂಮಿ ಹೋರಾಟ ಮತ್ತು ಕರಸೇವಕರ ಬಲಿದಾನ ಕುರಿತು ವಿವರಿಸಿದರು.
ದೇಗಲಮಡಿಯ ಬಸವಲಿಂಗ ಅವಧೂತರು ಸಾನಿಧ್ಯ ವಹಿಸಿದ್ದರು, ತಾಲ್ಲೂಕು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ, ಡಾ.ಸಂಜಯ ಗೋಳೆ, ಡಾ.ದೀಪಕ ಪಾಟೀಲ, ಡಾ.ಕೀರ್ತಿ ಪಾಟೀಲ, ಸುಧಾ, ವೀರೇಂದ್ರ ಮುರುಡಾ, ಅರವಿಂದ ಚಂದಿಮನಿ, ರೇವಣಸಿದ್ದ ಮೋಘಾ, ಶ್ರೀಕಾಂತ ಪಿಟ್ಟಲ್ ಇದ್ದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಿವುಣೋರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಗಿರಿರಾಜ ನಾಟಿಕಾರ ನಿರೂಪಿಸಿದರು. ನೀಲಕಂಠ ಹುಡಗಿ ವಂದಿಸಿದರು. ಶಿಬಿರದಲ್ಲಿ 26 ಯುವಕರು ಜಿಮ್ಸ್ಗೆ ಹಾಗೂ 42 ಯುವಕರು ಬಸವೇಶ್ವರ ಆಸ್ಪತ್ರೆಯ ಬ್ಲಡ್ ಬ್ಯಾಂಕ್ಗೆ ರಕ್ತದಾನ ಮಾಡಿದರು.