ಕಲಬುರ್ಗಿ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಅನುರೂಪ ಶಾ ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಸ್ತನ್ಯಪಾನದ ಪ್ರಾಮುಖ್ಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇನ್ನರ್ವೀಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ, ಜೈನ್ ಸೋಷಿಯಲ್ ಗ್ರೂಪ್ ಸಂಗಿನಿ ಹಾಗೂ ಭಾರತೀಯ ಶಿಶುವೈದ್ಯರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರಸೂತಿ ಹಾಗೂ ಹೆರಿಗೆ ವೈದ್ಯರಾದ ಡಾ.ಹೇಮಾ ಸಿಂಹಾಸನೆ ಮಾತನಾಡಿ, ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಮಗು ಹುಟ್ಟಿದ ಅರ್ಧ ಗಂಟೆ ಒಳಗಾಗಿ ಎದೆಹಾಲುಣಿಸಬೇಕು ಎಂದು ಹೇಳಿದರು.
ಎದೆಹಾಲು ಕುಡಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬ ಮನೋಭಾವ ಹೆಚ್ಚುತ್ತಿದೆ. ಇದು ಸರಿಯಲ್ಲ. ಸತತವಾಗಿ ಆರು ತಿಂಗಳು ಎದೆಹಾಲು ಮಾತ್ರ ಕುಡಿಸಬೇಕು. ಇದರಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಮಗುವನ್ನು ಎತ್ತಿಕೊಳ್ಳುವ ವಿಧಾನ, ಎದೆಹಾಲಿನ ಪ್ರಾಮುಖ್ಯ ಹಾಗೂ ಇನ್ನಿತರ ವಿಷಗಳ ಕುರಿತು ತಾಯಂದಿರಿಗೆ ಮಾಹಿತಿ ನೀಡಿದರು.
ಇನ್ನರ್ವೀಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ಕಾರ್ಯದರ್ಶಿ ಪಲ್ಲವಿ ಮುಕ್ಕಾ ಮಾತನಾಡಿ, ಕ್ಲಬ್ ವತಿಯಿಂದ ಆಗಸ್ಟ್ 1ರಿಂದ 7ವರೆಗೆ ಸ್ತನ್ಯಪಾನ ಸಪ್ತಾಹವನ್ನು ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ಈ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಈ ಮೂಲಕ ಸ್ತನ್ಯಪಾನದ ಮಹತ್ವದ ಕುರಿತು ತಾಯಂದಿರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಭಾರತೀಯ ಶಿಶುವೈದ್ಯರ ಅಕಾಡೆಮಿ ಅಧ್ಯಕ್ಷೆ ಡಾ.ವಾಣಿ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಅನುರೂಪ ಶಾ, ಇನ್ನರ್ವೀಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ಅಧ್ಯಕ್ಷೆ ರಜನಿ ಗುಪ್ತಾ, ಜೈನ್ ಸೋಷಿಯಲ್ ಗ್ರೂಪ್ ಸಂಗಿನಿಯ ಕಾರ್ಯದರ್ಶಿ ಪಾರುಲ್ ಕೊಠಾರಿ, ಸೋನಾಲಿ ಪುನಜಗಿ, ಸಂಧ್ಯಾ ಅನುರೂಪ ಶಾ, ರೋಟರಿ ಸಹಾಯಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸದಸ್ಯರು, ತಾಯಂದಿರು ಇದ್ದರು.