ಕಲಬುರ್ಗಿ: ‘ಮುಂಬರುವ ವಿಭಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ರಾಜ್ಯಸಭಾ ಸದಸ್ಯ, ಪಕ್ಷದ ರಾಷ್ಟ್ರೀಯ ಸಂಯೋಜಕ ರಾಮ್ಜೀ ಗೌತಮ್ ಹೇಳಿದರು.
ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ವತಿಯಿಂದ ಗುರುವಾರ ನಗರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘2022ರಿಂದ 2024ರವರೆಗೆ ದೇಶದಲ್ಲಿ ಅಧಿಕಾರಕ್ಕಾಗಿ ಮಹಾಸಂಗ್ರಾಮ ನಡೆಯಲಿದೆ. ಕರ್ನಾಟಕದಿಂದ ಹೆಚ್ಚು ಜನರನ್ನು ಸಂಸತ್ಗೆ ಕಳಿಸುವ ಮೂಲಕ ಮಾಯಾವತಿ ಅವರ ಕೈಬಲಪಡಿಸಬೇಕು’ ಎಂದರು.
‘ದೇಶದ ಅಭಿವೃದ್ಧಿ ದೃಷ್ಟಿಯಿಂದ ಬಿಎಸ್ಪಿಗೆ ಅಧಿಕಾರ ನೀಡುವುದು ಮುಖ್ಯ. ರಾಜ್ಯದಲ್ಲಿ ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಕಾರ್ಯಕರ್ತರು ಸಿದ್ಧರಾಗಬೇಕು’ ಎಂದು ಹೇಳಿದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ‘ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಸಮರ್ಪಕವಾಗಿ ಜಾರಿ ಆಗಿದ್ದರೆ ದೇಶದಲ್ಲಿ ಬಡತನ, ಅಸಮಾನತೆ ಇರುತ್ತಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಪರಿಶಿಷ್ಟ ಜಾತಿಯ ಜನರ ಬದುಕು ಬದಲಾಗಿಲ್ಲ. ಅವರ ಮೇಲಿನ ದೌರ್ಜನ್ಯಗಳು ನಿಂತಿಲ್ಲ’ ಎಂದರು.
‘ಬಿಎಸ್ಪಿಗೆ ಅಧಿಕಾರ ನೀಡಿದರೆ ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ಮಾಡಿ ತೋರಿಸಿದ್ದಾರೆ’ ಎಂದರು.
ಪಕ್ಷದ ರಾಜ್ಯ ಉಸ್ತುವಾರಿ ಸುರೇಂದ್ರಸಿಂಗ್ ಕಲೋರಿಯಾ ಮಾತನಾಡಿದರು. ರಾಜ್ಯ ಉಸ್ತುವಾರಿ ದಿನೇಶ ಗೌತಮ, ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ವಾಸು, ಪ್ರಧಾನ ಕಾರ್ಯದರ್ಶಿ ಮಹಾದೇವ ಬಿ.ಧನ್ನಿ, ರಾಜ್ಯ ಘಟಕದ ಕಾರ್ಯದರ್ಶಿ ಎಲ್.ಆರ್.ಬೊಸ್ಲೆ, ಸೂರ್ಯಕಾಂತ ನಿಂಬಾಳ್ಕರ್, ಜಿಲ್ಲಾ ಸಂಯೋಜಕರಾದ ಕೆ.ಪ್ರಕಾಶ, ಮೈಲಾರಿ ಶೆಳ್ಳಗಿ, ಜೈಭೀಮ ಶಿಂದೆ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಸುಗೂರ, ಉಪಾಧ್ಯಕ್ಷರಾದ ಮಶಾಕ್ ಪಟೇಲ್, ಮಂಜುನಾಥ ನಾಲವಾರಕರ್, ಪ್ರಧಾನ ಕಾರ್ಯದರ್ಶಿ ಗೋರಖನಾತ ದೊಡ್ಡಮನಿ, ಯಲ್ಲಪ್ಪ ಛಲವಾದಿ, ರಾಜೇಂದ್ರ ದಂಡೋತಿಕರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.