ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸುಲೇಪೇಟದಲ್ಲಿ 76 ಕ್ವಿಂಟಲ್ ಪಡಿತರ (153 ಬ್ಯಾಗ್)ಅಕ್ಕಿ ಜಪ್ತಿ ಮಾಡಲಾಗಿದೆ ಎಂದು ತಹಶೀಲ್ದಾರ್ ಅಂಜುಮ ತಬಸ್ಸುಮ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಮಾಯಿಲ್ ಮಂಗಲಗಿ, ಮಹಿಬೂಬ್ ಟೆಂಗಳಿ ಹಾಗೂ ಶ್ರೀಧರ ರೆಡ್ಡಿ ಅವರ ವಿರುದ್ಧ ಸುಲೇಪೇಟ ಠಾಣೆಯಲ್ಲಿ ತಡರಾತ್ರಿ ಪ್ರಕರಣ ದಾಖಲಿಸಲಾಗಿದೆ.
ಜಪ್ತಿ ಮಾಡಿದ ₹ 1.96ಲಕ್ಷ ಮೊತ್ತದ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಚಿಂಚೋಳಿಯ ಉಗ್ರಾಣದಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುಲೇಪೇಟದಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದುಕೊಂಡು ತಹಶೀಲ್ದಾರ್ ಅಂಜುಮ ತಬಸ್ಸುಮ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೆದಾರ್ ಗೋಪಾಲಕೃಷ್ಣ, ಬಿ.ಎಸ್ ಪಂಚಾಳ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಮತ್ತು ಸಬ್ ಇನ್ಸ್ಪೆಕ್ಟರ್ ಸುಖಾನಂದ ಅವರು ದಾಳಿ ನಡೆಸಿದರು.